ಶಿವಮೊಗ್ಗ: ಮಹಾನಗರಪಾಲಿಕೆಯ ಆಶ್ರಯ ಯೋಜನೆಯಡಿ, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ 1997ರಲ್ಲಿ ‘ಎ’ ಇಂದ ‘ಜಿ’ ಬ್ಲಾಕ್ವರೆಗೆ ನಿವೇಶನ ರಹಿತರಿಗೆ ನಿವೇಶನ ಹಂಚಲಾಗಿದೆ. ಫಲಾನುಭವಿಗಳು 25 ವರ್ಷಗಳಾದರೂ ಸಹ ಮನೆ ನಿರ್ಮಿಸಿಕೊಂಡು ವಾಸವಿರುವುದಿಲ್ಲ. ಆದ ಕಾರಣ ಆಶ್ರಯ ಸಮಿತಿ ಸಭೆ ನಡೆಸಿ, ಖಾಲಿ ಇರುವ ನಿವೇಶನಗಳ ಮಹಜರ್ (ಸ್ಥಳ ಪರಿಶೀಲನಾ ವರದಿ) ಪಡೆದು, 543 ಖಾಲಿ ನಿವೇಶನ ರದ್ದುಪಡಿಸಲಾಗಿದೆ.
ಎ ಬ್ಲಾಕ್ನಲ್ಲಿರುವ ಒಟ್ಟು 44 ನಿವೇಶನಗಳು, ಬಿ ಬ್ಲಾಕ್ನಲ್ಲಿ 78, ಸಿ ಬ್ಲಾಕ್ನಲ್ಲಿ 97 ನಿವೇಶನಗಳು, ಡಿ ಬ್ಲಾಕ್ನಲ್ಲಿ 78, ಇ ಬ್ಲಾಕ್ನಲ್ಲಿ 51, ಎಫ್ ಬ್ಲಾಕ್ನಲ್ಲಿ 107 ಮತ್ತು ಜಿ ಬ್ಲಾಕ್ನಲ್ಲಿ 88 ಸೇರಿ ಒಟ್ಟು 543 ನಿವೇಶನಗಳು ಖಾಲಿ ಇರುತ್ತವೆ.
ನಿವೇಶನ ಪಡೆದ ಫಲಾನುಭವಿಗಳು ನಿವೇಶನದಲ್ಲಿ ಮನೆ ನಿರ್ಮಾಣ ಮಾಡದೇ ಖಾಲಿ ಇರುವುದರಿಂದ ನಿವೇಶನದಾರರು ಹಕ್ಕುಪತ್ರದ ಹಿಂದೆ ಇರುವ ಷರತ್ತು ಉಲ್ಲಂಘಿಸಿದ್ದು ಹಾಗೂ ತಮಗೆ ಮಂಜೂರಾಗಿರುವ ನಿವೇಶನಗಳಲ್ಲಿ ವಾಸಕ್ಕೆ ಹೋಗದೆ ತಾವುಗಳು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸದುಪಯೋಗ ಪಡಿಸಿಕೊಳ್ಳದೆ ಇರುವುದು ಕಂಡು ಬಂದಿರುತ್ತದೆ. ಇಂತಹ ನಿವೇಶನಗಳ ಬಗ್ಗೆ 2022ರ ಮೇ 25 ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಬಂದಿದ್ದ ಆಕ್ಷೇಪಣೆ ಇತ್ಯರ್ಥ ಪಡಿಸಲಾಗಿದೆ.
2022ರ ಆಗಸ್ಟ್ 10ರಂದು ಆಶ್ರಯ ಸಭೆಯ ವಿಷಯ ಸಂಖ್ಯೆ 7/1ರಲ್ಲಿ ತೀರ್ಮಾನಿಸಿರುವಂತೆ ಮನೆ ನಿರ್ಮಿಸಿಕೊಳ್ಳದ ಒಟ್ಟು 543 ಖಾಲಿ ನಿವೇಶನ ರದ್ದು ಮಾಡಲಾಗಿರುತ್ತದೆ ಎಂಬುದನ್ನು ಈ ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಯಪಡಿಸಿದೆ ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.