ಶಿವಮೊಗ್ಗ: ನಗರದಲ್ಲಿ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆಯ ಕನಸು ಖಾಸಗಿ ಆಯುರ್ವೇದ, ನರ್ಸಿಂಗ್ ಹೋಂಗಳ ಚಿತಾವಣೆಯಿಂದ ನನೆಗುದಿಗೆ ಬಿದ್ದಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಮುಖ್ಯಸ್ಥ ಕಲ್ಲೂರು ಮೇಘರಾಜ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ 2021 -22ರ ಬಜೆಟ್ನಲ್ಲಿ ಆಯುಷ್ ವಿವಿ ಯೋಜನೆಗೆ ₹20 ಕೋಟಿ ಮೀಸಲಿಟ್ಟಿತ್ತು. ಇದಕ್ಕಾಗಿ ಸೋಗಾನೆಯಲ್ಲಿ 100 ಎಕರೆ ಜಾಗ ಕೂಡ ಗುರುತಿಸಿತ್ತು. ಕಾಂಪೌಂಡ್ ನಿರ್ಮಿಸಲು ₹ 92 ಲಕ್ಷ ಕೂಡ ಬಿಡುಗಡೆ ಮಾಡಿತ್ತು. ಅದರಲ್ಲಿ ₹ 44 ಲಕ್ಷ ವೆಚ್ಚದಲ್ಲಿ 100 ಮೀಟರ್ ಕಾಂಪೌಂಡ್ ಕೂಡ ನಿರ್ಮಿಸಲಾಗಿದೆ. ಉಳಿದ ₹ 48 ಲಕ್ಷ ಲೋಕೋಪಯೋಗಿ ಕಚೇರಿಯಲ್ಲಿ ಡಿಪಾಸಿಟ್ ಕೂಡ ಆಗಿದೆ’ ಎಂದರು.
‘ಇಷ್ಟಾದರೂ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ವಿವಿ ಸ್ಥಾಪಿಸಲು ಸರ್ವೆ ನಂ. 120ರಲ್ಲಿದ್ದ 53 ಬಗರ್ಹುಕುಂ ಸಾಗುವಳಿದಾರರಿಗೆ ತಲಾ ₹ 2 ಲಕ್ಷ ಪರಿಹಾರ ನೀಡಿದೆ. ಅದರಲ್ಲಿ 20 ಬಗರ್ಹುಕುಂ ರೈತರು ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದರು. ಸಾರ್ವಜನಿಕರ ಹಿತಾಸಕ್ತಿಯಿಂದ ಈ ಮೊಕದ್ದಮೆಯನ್ನು ವಜಾಗೊಳಿಸಿದೆ. ಇಷ್ಟೆಲ್ಲಾ ಸಕಾರಾತ್ಮಕ ಅಂಶಗಳಿದ್ದರೂ ಈ ಯೋಜನೆಗೆ ಗ್ರಹಣ ಹಿಡಿದಿದೆ’ ಎಂದು ದೂರಿದರು.
ಕೇಂದ್ರದ ಟ್ರಸ್ಟಿ ಡಾ. ಶೇಖರ್ ಗೌಳೇರ್, ಪ್ರಮುಖರಾದ ಆರ್.ಎ. ಚಾಬೂಸಾಬ್, ಹೊಳೆಮಡಿಲು ವೆಂಕಟೇಶ್, ಎಚ್.ಎಂ. ಸಂಗಯ್ಯ, ಶಂಕ್ರಾನಾಯ್ಕ್ ಇದ್ದರು.