ಭದ್ರಾವತಿ: ಭದ್ರಾ ಜಲಾಶಯದಿಂದ ನೀರು ಹೊರಬಿಟ್ಟಿರುವ ಕಾರಣ ಭದ್ರಾನದಿ ತುಂಬಿ ಹರಿಯತ್ತಿದ್ದು, ಸುಗಮ ಸಂಚಾರ ವ್ಯವಸ್ಥೆಗೆ ನಗರಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮಗಳನ್ನು ಜರುಗಿಸಿದೆ.
ನದಿ ಪಾತ್ರದ ನಗರ ವ್ಯಾಪ್ತಿಯ ತಗ್ಗು ಪ್ರದೇಶದಲ್ಲಿನ ನಿವಾಸಿಗಳಿಗೆ ಆತಂಕ ಎದುರಾಗಿದ್ದು ಅವರ ರಕ್ಷಣೆಗಾಗಿ ಹಲವು ಮುಂಜಾಗ್ರತೆ ಕ್ರಮವನ್ನು ತಾಲ್ಲೂಕು ಹಾಗೂ ನಗರಾಡಳಿತ ಈಗಾಗಲೇ ಕೈಗೊಂಡಿದೆ.
ಬುಧವಾರ ರಾತ್ರಿ ವೇಳೆಗೆ ನದಿ ನೀರು ಹೊಸ ಸೇತುವೆ ರಸ್ತೆಯ ಮೇಲೆ ಹರಿಯುವ ಸಾಧ್ಯತೆ ಇರುವ ಕಾರಣ ಅಲ್ಲಿನ ಸಂಚಾರ ವ್ಯವಸ್ಥೆ ಸ್ಥಗಿತ ಮಾಡುವ ನಿಟ್ಟಿನಲ್ಲಿ ಪೊಲಿಸ್ ಇಲಾಖೆ ಕ್ರಮ ತೆಗೆದುಕೊಂಡಿದೆ.
ನದಿಯಲ್ಲಿನ ಸಂಗಮೇಶ್ವರ ದೇವಾಲಯದ ಗೋಪುರ ಮುಳುಗಿದ್ದು, ನದಿಪಾತ್ರದ ಏಕೀನ್ ಷಾ ಕಾಲೊನಿ, ಗೌಳಿಗರಬೀದಿ, ಗುಂಡೂರಾವ್ ಷೆಡ್, ಕವಲಗುಂದಿ ಭಾಗದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕೆಲಸಕ್ಕೂ ತಾಲ್ಲೂಕು ಆಡಳಿತ ಮುಂದಾಗಿದೆ.