ಸಾಗರ: ‘ಶಾಸಕ ಎಚ್. ಹಾಲಪ್ಪ ಹರತಾಳು ಅವರ ಆಡಳಿತ ವೈಫಲ್ಯವನ್ನು ಎತ್ತಿಹಿಡಿಯುವ ಮೂಲಕ ಪಕ್ಷದ ಸಂಘಟನೆಯನ್ನು ಮುಂದಿನ ಎರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸದೃಢಗೊಳಿಸುವ ಸಂಕಲ್ಪ ಮಾಡಿದ್ದೇನೆ’ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಗೋಪಾಲಕೃಷ್ಣ ಬೇಳೂರು ಅವರ ಜನ್ಮದಿನದ ಆಚರಣೆ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ರಾಜಕೀಯವಾಗಿ ನನ್ನನ್ನು ಮಣಿಸಲು ಸಾಧ್ಯ ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ. ಮುಂದಿನ ದಿನಗಳಲ್ಲಿ ಅಂತಹವರಿಗೆ ಕೆಲಸಗಳ ಮೂಲಕವೇ ತಕ್ಕ ಉತ್ತರ ನೀಡುತ್ತೇನೆ.ಕ್ಷೇತ್ರದಲ್ಲಿ ಶಾಸಕ ಹಾಲಪ್ಪ ಅವರಿಗೆ ಶೇ 10ರಷ್ಟು ಕಮಿಷನ್ ಕೊಡದೆ ಯಾವ ಕೆಲಸವೂ ಆಗುತ್ತಿಲ್ಲ. ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ ಎರಡು ವರ್ಷ ವಿಳಂಬವಾಗಲು ಕಮಿಷನ್ ವಿಷಯವೇ ಕಾರಣವಾಗಿದೆ. ಯಾವಾಗ ಕಮಿಷನ್ ಸಂದಾಯವಾಯಿತೋ ಆಗ ಕಾಮಗಾರಿ ಆರಂಭಕ್ಕೆ ಹಾಲಪ್ಪ ಒಪ್ಪಿಗೆ ನೀಡಿದ್ದಾರೆ’ ಎಂದು ಆರೋಪಿಸಿದರು.
‘ಶಿವಮೊಗ್ಗದ ಈಡಿಗ ಸಮುದಾಯ ಭವನ ವಿಷಯಕ್ಕೆ ಸಂಬಂಧಿ ಸಿದಂತೆ ಶಾಸಕ ಹಾಲಪ್ಪ ಅವರು ಅನಗತ್ಯವಾಗಿ ಸಾಮಾಜಿಕ ಜಾಲತಾಣ ಗಳಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮೋದಿ, ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ ಅವರನ್ನು ನಾನು ಈ ಹಿಂದೆ ಟೀಕಿಸಿದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣ ದಲ್ಲಿ ಹರಡಲಾಗುತ್ತಿದೆ. ರಾಜಕೀಯದಲ್ಲಿ ವಿರೋಧಿಗಳನ್ನು ಟೀಕಿಸುವುದು ಸಾಮಾನ್ಯ. ಹಾಲಪ್ಪ ಬಂಗಾರಪ್ಪ ಅವರ ಜೊತೆಗಿದ್ದಾಗ ಯಡಿಯೂರಪ್ಪ ಅವರನ್ನು ಟೀಕಿಸಿರಲಿಲ್ಲವೇ’ ಎಂದು ಪ್ರಶ್ನಿಸಿದರು.
‘ಜನರ ವಿಶ್ವಾಸವನ್ನೇ ಆಧಾರ ವಾಗಿಟ್ಟುಕೊಂಡು ರಾಜಕೀಯ ಮಾಡುತ್ತಿರುವೆ. ಹಾಲಪ್ಪ ಅವರಂತೆ ‘ವ್ಯಾವಹಾರಿಕ’ ರಾಜಕಾರಣ ನನ್ನದಲ್ಲ. ಹುಟ್ಟುಹಬ್ಬ ವನ್ನು ಅಭಿಮಾನಿಗಳೇ ಖರ್ಚು ಮಾಡಿ ಆಚರಿಸುತ್ತಿದ್ದಾರೆ’ ಎಂದರು.
ಕಾಂಗ್ರೆಸ್ ಮುಖಂಡರಾದ ಅನಿತಾಕುಮಾರಿ, ಸುಮಂಗಲಾ ರಾಮಕೃಷ್ಣ, ಮಧು ಮಾಲತಿ, ಎನ್. ಲಲಿತಮ್ಮ, ಗಣಪತಿ ಮಂಡಗಳಲೆ, ಪರಿಮಳ, ಎನ್.ಉಷಾ, ವೀಣಾ ಪರಮೇಶ್ವರ್, ಸರಸ್ವತಿ ಕುಮಾರಸ್ವಾಮಿ, ರೂಪಾ, ಭವ್ಯ, ಕೆ.ಹೊಳಿಯಪ್ಪ ಇದ್ದರು.