ಹೊಸನಗರ: ಭಾರಿ ವಾಹನಗಳು ಹುಲಿಕಲ್ ಘಾಟ್ ಮಾರ್ಗವಾಗಿ ಸಂಚರಿಸುತ್ತಿದ್ದು, ಸುಗಮ ಸಂಚಾರಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳ ಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.
ತೀರ್ಥಹಳ್ಳಿ–ಮಾಸ್ತಿಕಟ್ಟೆ–ಹುಲಿಕಲ್ ಮಾರ್ಗದಲ್ಲಿ ಸಂಚರಿಸಿದ ಬಳಿಕ ನಗರ ಚಿಕ್ಕಪೇಟೆ ಸೇತುವೆಯನ್ನು ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಹುಲಿಕಲ್ ಘಾಟ್ ಸಂಪರ್ಕ ಬಳಸಿ ವಿವಿಧ ಮಾರ್ಗಗಳಲ್ಲಿ ಭಾರಿ ವಾಹನಗಳು ಸಂಚರಿಸುತ್ತಿದ್ದು, ಹಲವೆಡೆ ವಿರೋಧ ವ್ಯಕ್ತವಾಗಿದೆ. ರಸ್ತೆ ಮತ್ತು ಸೇತುವೆಗಳು ಕುಸಿತಕ್ಕೊಳಗಾಗುವ ಆತಂಕ ಎದುರಾಗಿದೆ’ ಎಂದು ಹೇಳಿದರು.
‘ಈ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದ್ದು, ವಾಹನಗಳನ್ನು ಯಾವ ಮಾರ್ಗದ ಮೂಲಕ ಸಂಚಾರಕ್ಕೆ ಅವಕಾಶ ಕೊಡಬಹುದು ಎಂದು ಮಾಹಿತಿ ಪಡೆಯಲಾಗುತ್ತಿದೆ. ಶೀಘ್ರ ತುರ್ತು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಹುಲಿಕಲ್ ಘಾಟ್ ಬಗ್ಗೆ ಸಮಗ್ರ ವರದಿ: ರಾಜ್ಯದ ಪ್ರಮುಖ ಘಾಟ್ ಸಂಪರ್ಕದಲ್ಲಿ ವ್ಯತ್ಯಯಗೊಂಡಾಗ ಹುಲಿಕಲ್ ಘಾಟ್ ಸಂಪರ್ಕವನ್ನು ಪರ್ಯಾಯವಾಗಿ ಬಳಸಲಾಗುತ್ತಿದೆ. ಈ ಹಿಂದೆ ಕೂಡ ಅಭಿವೃದ್ಧಿ ಅಧ್ಯಯನ ನಡೆಸಿ ಹೆದ್ದಾರಿ ಅಧಿಕಾರಿಗ ಳೊಂದಿಗೆ ಮಾತುಕತೆ ನಡೆಸಲಾಗಿತ್ತು. ಮತ್ತೆ ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.
ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್, ತಹಶೀಲ್ದಾರ್ ವಿ.ಎಸ್.ರಾಜೀವ್, ಸಿಪಿಐ ಜಿ.ಕೆ.ಮಧುಸೂದನ್, ಡಿಟಿ ಗೌತಮ್ ಇದ್ದರು.
ರಸ್ತೆ ಕುಸಿತದ ಭೀತಿ: ವಾಹನ ಸಂಚಾರ ಸ್ಥಗಿತ
ಶಿವಮೊಗ್ಗ: ಹೊಸನಗರದಿಂದ ನಗರ– ನಾಗೋಡಿ ಮಾರ್ಗವಾಗಿ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ನಗರ– ಚಿಕ್ಕಪೇಟೆ ಮಧ್ಯದಲ್ಲಿರುವ ಸೇತುವೆ ಮತ್ತು ಶಿವಮೊಗ್ಗ– ತೀರ್ಥಹಳ್ಳಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಕುಸಿಯುವ ಭೀತಿ ಎದುರಾಗಿದ್ದು, ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ
ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಮಾರ್ಗದಿಂದ ಕುಂದಾಪುರ ಮತ್ತು ಕುಂದಾಪುರದಿಂದ– ಶಿವಮೊಗ್ಗಕ್ಕೆ ಸಂಚರಿಸುವ ಭಾರಿ ವಾಹನಗಳು ಶಿವಮೊಗ್ಗ– ಸಾಗರ– ಹೊನ್ನಾವರ ಮಾರ್ಗದಲ್ಲಿ, ಶಿವಮೊಗ್ಗದಿಂದ ಉಡುಪಿ– ಮಂಗಳೂರು ಮತ್ತು ಮಂಗಳೂರಿನಿಂದ ಉಡುಪಿ ಶಿವಮೊಗ್ಗಕ್ಕೆ ಸಂಚರಿಸುವ ಭಾರಿ ವಾಹನಗಳು ಶಿವಮೊಗ್ಗ– ಕೊಪ್ಪ– ಕಾರ್ಕಳ– ಮಂಗಳೂರು ಮಾರ್ಗದಲ್ಲಿ, ಶಿವಮೊಗ್ಗದಿಂದ ಕುಂದಾಪುರಕ್ಕೆ ಸಂಚರಿಸುವ ಭಾರಿ ವಾಹನಗಳು ಶಿವಮೊಗ್ಗ– ಹೊಸನಗರ– ಹುಲಿಕಲ್ ಘಾಟ್– ಸಿದ್ದಾಪುರ– ಕುಂದಾಪುರ ಮಾರ್ಗದಲ್ಲಿ, ಶಿವಮೊಗ್ಗದಿಂದ ಮಂಗಳೂರಿಗೆ ಸಂಚರಿಸುವ ಭಾರಿ ವಾಹನಗಳು ಶಿವಮೊಗ್ಗ– ನರಸಿಂಹರಾಜಪುರ– ಕೊಪ್ಪ– ಶೃಂಗೇರಿ– ಕಾರ್ಕಳ– ಮಂಗಳೂರು ಮಾರ್ಗವಾಗಿ ಸಂಚರಿಸುವಂತೆ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.