ಶಿವಮೊಗ್ಗ: ಸಿದ್ದರಾಮಯ್ಯ ಅವರನ್ನು ಪಕ್ಕಕ್ಕೆ ಸರಿಸಿ ಮುಖ್ಯಮಂತ್ರಿಯಾಗುವ ಸಲುವಾಗಿ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಅವರು ಡಿ.ಕೆ.ಶಿವಕುಮಾರ್ ಅಲ್ಲ, ಕೆ.ಡಿ ಶಿವಕುಮಾರ್ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
‘ಶಿವಕುಮರ್ ತಿಹಾರ್ ಜೈಲಿಗೆ ಹೋಗಿದ್ದರು. ಅವರನ್ನು ನಾವು ಕಳುಹಿಸಿದ್ದೆವಾ? ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದರು. ಹಾಗಾಗಿ, ಜೈಲಿಗೆ ಹೋಗಿ ಬಂದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ಶಿವಕುಮಾರ್ ಮಂತ್ರಿ ಆಗಿದ್ದವರು. ಈಗ ಪಾದಯಾತ್ರೆ ಮಾಡಿದರೆ ಅವರನ್ನು ಜೈಲಿಗೆ ಹಾಕೋಕೆ ಆಗತ್ತಾ ಎಂದು ಛೇಡಿಸಿದರು.
ಪಾದಯಾತ್ರೆಯಲ್ಲಿ ಯಾವುದೇ ನಿಯಮ ಪಾಲನೆ ಆಗಿಲ್ಲ. ಸಿದ್ದರಾಮಯ್ಯ ಅವರಿಗೆ ಜ್ವರ ಕಾಣಿಸಿಕೊಂಡಿದೆ. ವಾಪಸ್ ಹೋಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಜ್ವರ ಹತ್ತಿಸಿ, ರಾಜ್ಯದ ಜನರಿಗೂ ಕೋವಿಡ್ ಹರಡಲು ಪಾದಯಾತ್ರೆಯೇ ಎಂದು ಪ್ರಶ್ನಿಸಿದರು.