ಸಾಗರ: ಕ್ಷೇತ್ರದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅನಗತ್ಯವಾಗಿ ಬಿಜೆಪಿ ಹಾಗೂ ಶಾಸಕರ ಹೆಸರನ್ನು ಎಳೆದು ತಂದು ಗೊಂದಲ ಸೃಷ್ಟಿಸುವವರಿಗೆ ಮಣೆ ಹಾಕಬೇಡಿ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಪಕ್ಷದ ಗ್ರಾಮಾಂತರ ವಿಭಾಗದ ಸಂಘಟನಾ ಸಭೆಯಲ್ಲಿ ಮಾತನಾಡಿದರು.
‘ಎಂಡಿಎಫ್ ವಿವಾದದ ಕುರಿತು ಪರೋಕ್ಷವಾಗಿ ಪ್ರಸ್ತಾಪಿಸುತ್ತ, ವಿರೋಧ ಪಕ್ಷಗಳಿಗೆ ಜನರ ಬಳಿ ಹೋಗಲು ಯಾವುದೇ ಪ್ರಮುಖ ವಿಷಯವಿಲ್ಲದ ಕಾರಣ ಇಲ್ಲಸಲ್ಲದ ವಿಷಯಗಳನ್ನು ಜನರ ಮುಂದೆ ತಂದು ಕೆಟ್ಟ ರಾಜಕಾರಣ ಮಾಡುತ್ತಿವೆ’ ಎಂದು ದೂರಿದರು.
ಬಿಜೆಪಿಯ ಅವಧಿಯಲ್ಲಿ ಆಗಿರುವಷ್ಟು ಅಭಿವೃದ್ಧಿ ಕಾರ್ಯ ಹಿಂದೆಂದೂ ಆಗಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರ ಸಮರ್ಥ ನಾಯಕತ್ವ ಪಕ್ಷಕ್ಕೆ ಇದೆ. ನಾಯಕತ್ವದ ಕೊರತೆಯಿಂದ ಬಳಲುತ್ತಿರುವ ಕಾಂಗ್ರೆಸ್ ಪಕ್ಷದ ಸ್ಥಿತಿ ಹಿಂದೆಂದಿಗಿಂತಲೂ ಹೀನಾಯವಾಗಿದೆ ಎಂದರು.
ಏಪ್ರಿಲ್ 6ರಂದು ಬಿಜೆಪಿಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ತಾಲ್ಲೂಕಿನ 5280 ಬೂತ್ಗಳಲ್ಲಿ ಬಿಜೆಪಿ ಪ್ರಮುಖರ ಮನೆಯ ಮೇಲೆ ಪಕ್ಷದ ಬಾವುಟ ಹಾರಿಸುವ ಕಾರ್ಯಕ್ರಮವಿದೆ. ಪಕ್ಷದ ಪ್ರಮುಖರು ನೀಡುವ ಸೂಚನೆಯನ್ನು ಕಾರ್ಯಕರ್ತರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಗ್ರಾಮಾಂತರ ಅಧ್ಯಕ್ಷ ಲೋಕನಾಥ ಬಿಳಿಸಿರಿ, ಎಪಿಎಂಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು, ಪ್ರಮುಖರಾದ ಯು.ಎಚ್.ರಾಮಪ್ಪ, ದೇವೇಂದ್ರಪ್ಪ ಯಲಕುಂದ್ಲಿ ಇದ್ದರು.