ತೀರ್ಥಹಳ್ಳಿ: ಸ್ತ್ರೀಯರನ್ನು ಸಂಸಾರದ ಬಂಧನಗಳಿಂದ ಸಾರ್ವಜನಿಕ ಕ್ಷೇತ್ರಕ್ಕೆ ಬಿಡುಗಡೆಗೊಳಿಸುವ ಮನೋಭಾವ ಬೆಳೆಯುತ್ತಿಲ್ಲ. ಮಹಿಳೆಯರಲ್ಲಿ ಆಧುನಿಕ ಪ್ರಜ್ಞೆ ಬೆಳೆಸುವ ಉತ್ಕೃಷ್ಟ ಸಾಹಿತ್ಯದ ಮೂಲಕ ಕುವೆಂಪು ಅವರು ಮಹಿಳೆಯರಿಗೆ ವಿಶೇಷ ಸ್ಥಾನ ಕಲ್ಪಿಸಿದ್ದಾರೆ ಎಂದು ವಿಮರ್ಶಕ ರಹಮತ್ ತರೀಕೆರೆ ತಿಳಿಸಿದರು.
ಕುಪ್ಪಳಿಯಲ್ಲಿ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿರುವ ‘ಹೆಣ್ಣ ಕಣ್ಣೋಟದಲ್ಲಿ ಕುವೆಂಪು ಅವರ ಸಾಹಿತ್ಯ ಕುರಿತು ಮೂರು ದಿನಗಳ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ತ್ರೀ ಅಡುಗೆ ಮನೆಗೆ ಸೀಮಿತವಾಗಿಯೇ ಬಹಳಷ್ಟು ಸಾಹಿತ್ಯ ರಚನೆಗೊಂಡಿದೆ. ಸಾಹಿತ್ಯ ಲೋಕದಲ್ಲಿ ಉಣ್ಣುವ ಚಿತ್ರಣ ಇದ್ದರೂ ಅಡುಗೆಮನೆಯ ವಿವರಣೆ ಕಡಿಮೆ. ಕುವೆಂಪು ಸಾಹಿತ್ಯದಲ್ಲಿ ಹೊಗೆಯಿಂದ ಆವರಿಸಿದ ಅಡುಗೆಮನೆಯ ಚಿಕ್ಕ ಕಿಟಕಿ, ಬೆಕ್ಕು, ನೊಣಗಳ ಪಾತ್ರವೂ ಪ್ರಮುಖ ವಿಷಯವಾಗಿ ಕಾಣಿಸಿಕೊಂಡಿದೆ ಎಂದು ವಿಶ್ಲೇಷಿಸಿದರು.
ತಾಯ್ತನದ ಕಲ್ಪನೆಗಳಿಂದ ಪುಟ್ಟ ವಿಚಾರಗಳನ್ನು ಪರಿಪಕ್ವವಾಗಿ ಚಿತ್ರಿಸಿದ್ದಾರೆ. ಮದುವೆಯ ನಂತರ ಕೆಲವೇ ದಿನಗಳಲ್ಲಿ ಗಂಡ ತೀರಿಕೊಂಡ ಹೆಣ್ಣಿನ ಕುರಿತು ಮರಕು ವ್ಯಕ್ತಪಡಿಸುವ ಮತ್ತೋರ್ವ ತಾಯಿಯ ರೋಧನವನ್ನು ಅತ್ಯಂತ ಕರಾರುವಕ್ಕಾಗಿ ಬಿಂಬಿಸಿದ್ದಾರೆ. ಸ್ವರ್ಗದ ಬಾಗಿಲು ತೆರೆಯಲು ಕುವೆಂಪು ಹೇಮಿಯ ಗಂಡ ಎಂಬ ಪದ ಬಳಕೆ ಮಾಡುವುದು ಸ್ತ್ರೀ ಸ್ವಾತಂತ್ರ್ಯದ ದ್ಯೋತಕ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಷ್ಪಾ, ಕವಯಿತ್ರಿ ಡಾ.ಎಲ್.ಸಿ. ಸುಮಿತ್ರಾ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್, ಖಜಾಂಚಿ ಡಿ.ಎಂ. ಮನುದೇವ್ ಮಾತನಾಡಿದರು.