ಶಿವಮೊಗ್ಗ: ನಾಟಕದಂತಹ ಪ್ರಬಲ ಮಾಧ್ಯಮದ ಮೂಲಕ ಸ್ತ್ರೀ ಕೇಂದ್ರಿತ ಅನುಭವಗಳನ್ನು ಶೋಧಿಸುವ ಅಗತ್ಯವಿದೆ ಎಂದು ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕಿ ಡಾ. ರಜನಿ ಪೈ ತಿಳಿಸಿದರು.
ಶಿವಮೊಗ್ಗ ರಂಗಾಯಣದಲ್ಲಿ ಶನಿವಾರ ಆಯೋಜಿಸಿದ್ದ ಜೀವನ್ಮುಖಿ ಮಹಿಳಾ ರಂಗೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸೃಜನಶೀಲ ಮಹಿಳೆ ಯರನ್ನು ಅಸಹ್ಯವಾಗಿ ಟ್ರೋಲ್ ಮಾಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ರಂಗಭೂಮಿ ಬಹಳ ಎಚ್ಚರದಿಂದ ಸೂಕ್ಷ್ಮವಾಗಿ ಆಕೆಯನ್ನು ಪ್ರತಿನಿಧಿಸಬೇಕು. ರಂಗದ ಮೇಲೆ ಮಹಿಳೆಯರು ಇರುವುದಕ್ಕಿಂತ, ರಂಗದ ಮೇಲೆ ಇಂದಿನ ಸ್ತ್ರೀ ಸಮುದಾಯದ ವಾಸ್ತವ ಸ್ಥಿತಿಗಳು ಪ್ರಧಾನವಾಗಬೇಕು. ಮಹಿಳೆಯನ್ನು ಸಮಗ್ರವಾಗಿ ಮತ್ತು ನೈಜವಾಗಿ ತೋರಿಸದಿದ್ದರೆ ಅಂತಹ ಸಂಸ್ಕೃತಿಯನ್ನು ಆರೋಗ್ಯಪೂರ್ಣ ಎನ್ನಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿದ್ದರೂ, ಅವರನ್ನು ಗಮನಿಸಲಾಗುತ್ತಿಲ್ಲ. ಕೆಲವು ಕ್ಷೇತ್ರಗಳಲ್ಲಿ ಅವರ ಇರುವಿಕೆಯನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ಮಹಿಳೆಗೆ ಸಿಗಬೇಕಾದ ಮಹತ್ವ ಸಿಗದೆ ಹೋಗುವ ಅಪಾಯವಿದೆ. ಮಹಿಳೆಯರ ಬಹುಮುಖ ಪ್ರತಿಭೆ ಹಾಗೂ ಸಾಧನೆಗಳನ್ನು ಸಾಧ್ಯವಾದ ರೀತಿಯಲ್ಲಿ ಆಚರಿಸುವ ಅಗತ್ಯವಿದೆ ಎಂದರು.
ಮೇಯರ್ ಸುವರ್ಣಾ ಶಂಕರ್, ‘ಹಿಂದಿನ ಕಾಲದಲ್ಲಿ ನಾಟಕಗಳೇ ಮನರಂಜನೆಯ ಕೇಂದ್ರವಾಗಿತ್ತು. ಇಂದಿಗೂ ನಾಟಕ ಪ್ರಬಲ ಮಾಧ್ಯಮ. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ತಲುಪಿಸಲು ಪರಿಣಾಮಕಾರಿಯಾಗಿದೆ’ ಎಂದರು.
ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ, ‘ಮಹಿಳಾ ದಿನಾಚರಣೆ ಅಂಗವಾಗಿ ನಾಟಕೋತ್ಸವ ಆಯೋಜಿಸಲಾಗಿದೆ. ನಾಟಕೋತ್ಸವದಲ್ಲಿ ಸ್ತ್ರೀ ಸಂವೇದನೆಯ ನಾಟಕಗಳು, ಏಕವ್ಯಕ್ತಿ ಪ್ರದರ್ಶನ, ವಿಚಾರಗೋಷ್ಠಿ, ಕಿರುಚಿತ್ರ ಪ್ರದರ್ಶನ, ರಂಗಗೀತೆಗಳ ಕಾರ್ಯಕ್ರಮ ನಡೆಯಲಿದೆ’ ಎಂದರು.
ರಂಗ ಸಮಾಜದ ಸದಸ್ಯ ಹಾಲಸ್ವಾಮಿ ಆಶಯ ನುಡಿಗಳನ್ನಾ ಡಿದರು. ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಸ್ವಾಗತಿಸಿದರು.