ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ ಮುಡಿದು ದಸರಾ ಆಚರಣೆ

Last Updated 27 ಅಕ್ಟೋಬರ್ 2020, 3:47 IST
ಅಕ್ಷರ ಗಾತ್ರ

ಶಿಕಾರಿಪುರ:ವಿವಿಧ ಗ್ರಾಮಗಳ ದೇವರ ಸಮ್ಮುಖದಲ್ಲಿ ತಾಲ್ಲೂಕಿನ ಬೇಗೂರು ಗ್ರಾಮದ ಮರಡಿ ತಾಂಡಾದ ಗಾಳಿ ಆಂಜನೇಯ ದೇವಸ್ಥಾನ ಮುಂಭಾಗದ ದಿಬ್ಬದಲ್ಲಿ ಸೋಮವಾರ ಬನ್ನಿ ಮುಡಿಯುವ ಮೂಲಕ ತಾಲ್ಲೂಕಿನ ಜನತೆ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಸಂಪ್ರದಾಯದಂತೆ ಶಿಕಾರಿಪುರ ಪಟ್ಟಣದ ಹುಚ್ಚರಾಯಸ್ವಾಮಿ, ದೊಡ್ಡಕೇರಿ ಗಿಡ್ಡಯ್ಯ ಸ್ವಾಮಿ, ಶಿರಸಿ ಮಾರಿಕಾಂಬಾ, ಬೇಗೂರು ಗ್ರಾಮದ ಆಂಜನೇಯಸ್ವಾಮಿ, ಬೆಂಡೆಕಟ್ಟೆ ಬಸವೇಶ್ವರ ಸ್ವಾಮಿ, ಆಪಿನಕಟ್ಟೆ ಕೊನೆ ಬಸವಣ್ಣ ಹಾಗೂ ಬಾಳೆಕೊಪ್ಪದ ಹನುಮಂತ ದೇವರ ಮೂರ್ತಿಯನ್ನು ಪಲ್ಲಕ್ಕಿ ಮೂಲಕ ಬೇಗೂರು ಗ್ರಾಮದ ಮರಡಿ ತಾಂಡಾಕ್ಕೆ ಹೊತ್ತು ತರಲಾಯಿತು. ಈ ಬಾರಿ ಪಟ್ಟಣದ ಸೊಪ್ಪಿನಕೇರಿ ಹುಲಿಕಟ್ಟೆಪ್ಪಸ್ವಾಮಿ ದೇವರು ಪೂಜೆಯಲ್ಲಿ ಪಾಲ್ಗೊಂಡಿರಲಿಲ್ಲ.

ಎಲ್ಲಾ ದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ನಂತರ ಸಂಪ್ರದಾಯದಂತೆ ಮೈಸೂರು ಪೇಟ ಧರಿಸಿದ್ದ ತಹಶೀಲ್ದಾರ್‌ ಎಂ.ಪಿ. ಕವಿರಾಜ್‌ ಐತಿಹಾಸಿಕ ದೊಂಡಿವಾಘನ ಖಡ್ಗ ಹಿಡಿದು ಬನ್ನಿಗೆ ಪೂಜೆ ಸಲ್ಲಿಸಿ, ಬಾಳೆ ಕಂಬವನ್ನು ಕತ್ತರಿಸುವ ಮೂಲಕ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಿದರು.

ತಹಶೀಲ್ದಾರ್‌ ಎಂ.ಪಿ. ಕವಿರಾಜ್‌, ‘‌ಭಕ್ತರ ಬೇಡಿಕೆಯಂತೆ 9 ಎಕರೆ 36 ಗುಂಟೆಯ ಈ ಸ್ಥಳವನ್ನು ದೇವಸ್ಥಾನ ಉದ್ದೇಶಕ್ಕಾಗಿ ಹಾಗೂ ಬನ್ನಿ ಮುಡಿಯುವ ಕಾರ್ಯಕ್ಕಾಗಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಮೀಸಲಿಟ್ಟಿದೆ. ಈ ಸ್ಥಳದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹ 3 ಕೋಟಿ ಅನುದಾನ ನೀಡಿದ್ದಾರೆ’ ಎಂದರು.

ಬನ್ನಿ ಮುಡಿಯುವ ಕಾರ್ಯಕ್ರಮದ ನಂತರ ನಾಗರಿಕರು ವಿವಿಧ ಗ್ರಾಮಗಳಲ್ಲಿ ಬನ್ನಿ ವಿತರಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT