ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಗುರುವಾರ ವೀಕ್ಷಿಸಿದ ಶಾಸಕ ಕೆ.ಎಸ್.ಈಶ್ವರಪ್ಪ ಕೆಲವು ಕಡೆ ಕಾಮಗಾರಿಗಳ ಅವ್ಯವಸ್ಥೆ ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರಸ್ತೆ ಮಧ್ಯದಲ್ಲಿರುವ ಕೆಲವು ಹೊಂಡಗಳು ಮತ್ತು ಯುಜಿ ಕೇಬಲ್ಗಳ ನಿಯಂತ್ರಣ ಬಾಕ್ಸ್ ಕೆಳಗೆ ಅಪಾಯಕಾರಿ ಸ್ಥಿತಿಯಲ್ಲಿ ಇರುವ ಕೇಬಲ್ಗಳ ಬಗ್ಗೆ ಕೆಲವರು ಗಮನ ಸೆಳೆದಾಗ, ‘ಈ ಬಗ್ಗೆ ಕಂಟ್ರಾಕ್ಟರ್ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಎಲ್ಲ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ಮುಗಿಸಿ, ಮುಕ್ತಾಯ ಹಂತದಲ್ಲಿ ಸಣ್ಣಪುಟ್ಟ ಲೋಪಗಳನ್ನು ಬಿಡದೆ ಸರಿಪಡಿಸಬೇಕು ಎಂದು ತಾಕೀತು ಮಾಡಿದ್ದೇನೆ’ ಎಂದು ಹೇಳಿದರು.
ಐಬಿ ವೃತ್ತದಸೂಕ್ತ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಲಹೆ ಪಡೆದು ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಯ ಪ್ರತಿಮೆ ಸ್ಥಾಪಿಸಲು ಸ್ಮಾರ್ಟ್ ಸಿಟಿ ಕ್ರಮ ಕೈಗೊಂಡಿದ್ದು, ಆ ಸ್ಥಳವನ್ನು ಮತ್ತು ಪ್ರವಾಸಿ ಮಂದಿರದ ವೃತ್ತವನ್ನು ಆಕರ್ಷಕವಾಗಿ ಕಾಣುವಂತೆ ಮಾಡಲಾಗುವುದು ಎಂದು ತಿಳಿಸಿದರು.
ರಾಜೇಂದ್ರ ನಗರದಲ್ಲಿ ಅತ್ಯಾಧುನಿಕ ಷಟಲ್ ಬ್ಯಾಡ್ಮಿಂಟನ್ ಇಂಡೋರ್ ಸ್ಟೇಡಿಯಂ ಅನ್ನು ಉದ್ಘಾಟಿಸಲಾಯಿತು. ಬಳಿಕ ದೀನದಯಾಳ್ ರಸ್ತೆ, ಶರಾವತಿ ನಗರ, ಐಬಿ ವೃತ್ತ, ಹಾಲ್ಕೊಳ ವೃತ್ತ, ಗೋಪಾಳ, ಮಹಾವೀರ ವೃತ್ತ, ಕೇಂದ್ರ ಗ್ರಂಥಾಲಯ, ಶಿವಪ್ಪ ನಾಯಕ ಅರಮನೆಯನ್ನು ನವೀಕರಣಗೊಳಿಸುತ್ತಿದ್ದು, ಆ ಕಾಮಗಾರಿಗಳನ್ನೂ ವೀಕ್ಷಿಸಿದ ಈಶ್ವರಪ್ಪ ಅವರು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಸೂಡಾ ಅಧ್ಯಕ್ಷ ನಾಗರಾಜ್, ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮಿ ಶಂಕರ್ನಾಯ್ಕ್, ಪಾಲಿಕೆ ಸದಸ್ಯರಾದ ಸುವರ್ಣಶಂಕರ್, ಆರತಿ, ಸುರೇಖಾ ಮುರುಳೀಧರ್, ಸುನಿತಾ ಅಣ್ಣಪ್ಪ, ಆಯುಕ್ತರಾದ ಮಾಯಣ್ಣಗೌಡ ಹಾಗೂ ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆ, ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.