ತೀರ್ಥಹಳ್ಳಿ: ಸಾರ್ವಜನಿಕರ ದೇಣಿಗೆಯಿಂದ ಸರ್ಕಾರಿ ಶಾಲೆಯನ್ನು ಸದೃಢಗೊಳಿಸುವುದಕ್ಕೆ ತಾಲ್ಲೂಕಿನ ನಾಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಎಸ್ಡಿಎಂಸಿ, ಮುಖ್ಯ ಶಿಕ್ಷಕರು, ಸಹಶಿಕ್ಷಕರು ಕೈ ಜೋಡಿಸಿದ್ದಾರೆ.
ಕೋವಿಡ್-19 ಕಾರಣಕ್ಕೆ ಮುಚ್ಚಿದ್ದ ಶಾಲೆ ಆರಂಭವಾಗುತ್ತಿದ್ದಂತೆ ಶಾಲೆಯ ಅಗತ್ಯ ಪರಿಕರಗಳಿಗಾಗಿ ಸಾರ್ವಜನಿಕರಿಂದ ದೇಣಿಗೆ ಪಡೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಶಾಲೆಯ ಹಳೆ ವಿದ್ಯಾರ್ಥಿಗಳಾದ ಕೊಳಿಗೆ ಗ್ರಾಮದ ಕೆ.ವಿ. ಜೀವನ್, ಕೆ.ವಿ. ವರ್ಧನ್ ಸಹೋದರರು ಶಾಲೆಗೆ ಥರ್ಮಲ್ ಸ್ಕ್ಯಾನರ್ ಕೊಡುಗೆ ನೀಡಿದ್ದಾರೆ. ಗುಣಮಟ್ಟದ ಸ್ಕ್ಯಾನರ್ ನೀಡಿದ ದಾನಿಗಳನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಕಾರೇಮನೆ ಶಿವಪ್ಪ ಅಭಿನಂದಿಸಿದ್ದಾರೆ.
ದಾನಿಗಳಾದ ಕೆ.ವಿ. ಜೀವನ್, ಕೆ.ವಿ. ವರ್ಧನ್, ಮುಖ್ಯ ಶಿಕ್ಷಕಿ ಕೆ.ಎನ್. ಜಯಂತಿ, ಸಹ ಶಿಕ್ಷಕರಾದ ಅಶೋಕ್ ಪಾಟೀಲ್, ಟಿ.ಎನ್. ಸುಜಾತಾ, ಎಚ್.ಸಿ. ಪ್ರವೀಣ್, ಎಸ್ಡಿಎಂಸಿ ಸದಸ್ಯ ಕೊಳಿಗೆ ರಾಜೇಶ್ ಇದ್ದರು.