ಹೊಳೆಹೊನ್ನೂರು: ‘ಜಾನಪದ ಎಲ್ಲರ ಹಿತ ಬಯಸುತ್ತದೆ. ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಅಭಿವೃದ್ಧಿಯ ಓಟದಲ್ಲಿ ಜಾನಪದ ಸಾರಿದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ನಶಿಸಿಹೋಗುತ್ತಿರುವ ಈ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಮಥ ದರ್ಜೆ ಕಾಲೇಜಿನಲ್ಲಿ ಸೇವಾ ಯೋಜನಾ ಘಟಕ, ಸಾಂಸ್ಕೃತಿಕ ವೇದಿಕೆ, ಕನ್ನಡ ವಿಭಾಗ ಹಾಗೂ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಶಿವಮೊಗ್ಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಕನ್ನಡ ಜಾನಪದ ವೈಭವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ವರ್ತಮಾನದ ಬದುಕನ್ನು ಹಸನುಗೊಳಿಸಬೇಕಾದರೆ ಜಾನಪದದ ಬೇರುಗಳನ್ನು ಅರಿಯುವ ಅಗತ್ಯವಿದೆ. ಜಾನಪದ ಪರಂಪರೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ’ ಎಂದು ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಡಾ.ಭಾರತಿ ದೇವಿ.ಪಿ ಹೇಳಿದರು.
ಹೊಳೆನರಸೀಪುರದ ಖ್ಯಾತ ಜನಪದ ಕಲಾವಿದ ಪಂಪಾಪತಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಜನಪದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಜಿಲ್ಲಾ ಕನ್ನಡ ಜಾನಪದ ಪರಿಷತ್, ಶಿವಮೊಗ್ಗದ ಅಧ್ಯಕ್ಷ ಡಾ.ಎಂ.ವೆಂಕಟೇಶ್, ಸದಸ್ಯ ಕವಿತಾ ಸುಧೀಂದ್ರ, ಪ್ರೊ. ಪ್ರಕಾಶ್ ಎನ್.ಕೆ, ಡಾ. ಡಿ.ವಿ.ಶಿವರುದ್ರಪ್ಪ, ಕಾಲೇಜಿನ ನಿವೃತ್ತ ಅಧೀಕ್ಷಕ ಮಹದೇವ ಅವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.