ಹೊಳೆಹೊನ್ನೂರು: ಭೂಮಿಯ ಮೇಲಿರುವ ಎಲ್ಲ ಜೀವಿಗಳಲ್ಲೂ ಭಗವಂತನ ಸನ್ನಿಧಾನ ಇರುತ್ತದೆ ಎಂದು ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮತೀರ್ಥ ಶ್ರೀ ತಿಳಿಸಿದರು.
28ನೇ ಚಾತುರ್ಮಾಸ್ಯ ಸಂದರ್ಭದಲ್ಲಿ ಅವರು ಬುಧವಾರ ಭಾಗವತ ದಶಮ ಸ್ಕಂದ ಪ್ರವಚನ ನೀಡಿದರು.
‘ಆಂತರ ಮತ್ತು ಬಾಹ್ಯ ಎಂಬ ಎರಡು ರೀತಿಯಲ್ಲಿ ದೇವರ ಸನ್ನಿಧಾನ ಇರುತ್ತದೆ. ಸ್ವಾಭಾವಿಕವಾದ ಆಂತರಿಕ ಸನ್ನಿಧಾನ ಮತ್ತು ಪ್ರತಿಮೆಗಳ ರೂಪದಲ್ಲಿ ಬಾಹ್ಯ ಸನ್ನಿಧಾನ ಇರುತ್ತವೆ. ಹೀಗಾಗಿ ಜೀವ ಸ್ವರೂಪಿಯಲ್ಲಿ ಪರಮಾತ್ಮನ ಸನ್ನಿಧಾನ ಇರುತ್ತದೆ. ಅಲ್ಲದೆ ಎಲ್ಲ ಪ್ರಾಣಿಗಳಲ್ಲೂ ದೇವರ ಸನ್ನಿಧಾನ ಇದೆ ಎಂಬ ಚಿಂತನೆ ನಾವು ಮಾಡಬೇಕು’ ಎಂದರು.
ರಾಮಾಚಾರ್ಯ ಉಮರ್ಜಿ ಪ್ರವಚನ ನೀಡಿದರು. ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಪಂಡಿತ ನವರತ್ನ ಸುಬ್ಬಣ್ಣಾಚಾರ್ಯ, ಮಠದ ವ್ಯವಸ್ಥಾಪಕ ನವರತ್ನ ಶ್ರೀನಿವಾಸಾಚಾರ್ಯ ಇದ್ದರು.
ಪಾದಯಾತ್ರೆ: ಜು. 23ರಂದು ಕೂಡಲಿಯಿಂದ ಹೊಳೆಹೊನ್ನೂರುವರೆಗೆ ಮೂಲರಾಮ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕೂಡಲಿಯ ಚಿಂತಾಮಣಿ ನರಸಿಂಹ ದೇವರ ಸನ್ನಿಧಾನದಿಂದ ಬೆಳಗ್ಗೆ 7 ಗಂಟೆಗೆ ಪಾದಯಾತ್ರೆ ಆರಂಭ ಆಗಲಿದೆ. ಹೊಳೆಹೊನ್ನೂರಿನಲ್ಲಿ ಸತ್ಯಧರ್ಮ ತೀರ್ಥರ ದರ್ಶನ ಹಾಗೂ ಸಂಸ್ಥಾನ ದೇವರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.