ಶಿವಮೊಗ್ಗ: ಜಗದೀಶ ಶೆಟ್ಟರ್ ಅವರನ್ನು ನಾವು (ಬಿಜೆಪಿ) ಟಾರ್ಗೆಟ್ ಮಾಡಿಲ್ಲ. ಎಲ್ಲರೂ ಎಲ್ಲ ಕಡೆ ಹೋಗುತ್ತಿದ್ದೇವೆ. ಅದು ಶೆಟ್ಟರ್ ಅವರ ಹುಚ್ಚು, ಭ್ರಮೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ಜಗದೀಶ ಶೆಟ್ಟರ್ ಏನು ಇಂಟರನ್ಯಾಷನಲ್ ಲೀಡರಾ? ನಾವೆಲ್ಲಾ ಅಲ್ಲಿಗೆ ಹೋಗೋಕೆ. ಎಲ್ಲಿಂದ ಎಲ್ಲಿಗೆ ಹೋಗಿದ್ದೀರಿ ಎಂದು ನೆನಪಿಟ್ಟುಕೊಳ್ಳಿ. ಖಂಡಿತ, ಇದು ಒಳ್ಳೆಯದಲ್ಲ’ ಎಂದು ಕಿವಿಮಾತು ಹೇಳಿದರು.
‘ಎಲ್ಲಾ ಕಡೆ ಪ್ರಚಾರ ಮಾಡುವ ಹಾಗೇ ಹುಬ್ಬಳ್ಳಿಯಲ್ಲಿ ಪ್ರಚಾರ ಮಾಡ್ತಾ ಇದ್ದೇವೆ. ಹುಬ್ಬಳ್ಳಿ ಏನು ಪಾಕಿಸ್ತಾನನ? ಅಲ್ಲಿ ಬಿಟ್ಟು ಬೇರೆ ಕಡೆ ಪ್ರಚಾರ ಮಾಡೋಕೆ. ಎಲ್ಲ ಕಡೆಯಂತೆ ಅಲ್ಲೂ ಕೂಡ ಪ್ರಚಾರ ಮಾಡ್ತಾ ಇದ್ದೇವೆ’ ಎಂದರು.
ಜಗದೀಶ ಶೆಟ್ಟರ್ ಅನುಮತಿ ಪಡೆದು ಹುಬ್ಬಳ್ಳಿಗೆ ಹೋಗಬೇಕಾ ಎಂದು ಪ್ರಶ್ನಿಸಿದ ಈಶ್ವರಪ್ಪ, ‘ಶೆಟ್ಟರ್ ತಾಯಿಗೆ ದ್ರೋಹ ಮಾಡಿದವನು. ಬೆಳೆಸಿದ ತಾಯಿಯನ್ನೇ ಸಾಯಿಸಲು ಹೊರಟವನು’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
‘ಬಿಜೆಪಿಗೆ ವಾಪಸ್ ಬಾರಪ್ಪ ಎಂದು ಕರೆದೆ. ಆದರೆ ಮಾತು ಕೇಳಲಿಲ್ಲ. ಅಲ್ಲಿಯೇ ಇದ್ದು ಸಾಯಲಿ’ ಎಂದರು.
‘ಜಗದೀಶ ಶೆಟ್ಟರ್ಗೆ ಸೊಕ್ಕು ಬಂದಿದೆ. ಅಲ್ಲಿನ 16 ಜನ ಮಹಾನಗರ ಪಾಲಿಕೆ ಸದಸ್ಯರಲ್ಲಿ ಒಬ್ಬರೂ ಶೆಟ್ಟರ್ ಜೊತೆ ಹೋಗಿಲ್ಲ. ಅವರದ್ದು ಹಿಂದುತ್ವದ ರಕ್ತ. ಅವರು ಹೀಗೆ ಮಾಡುತ್ತಿದ್ದಾರಲ್ಲಾ ಎಂಬ ಕಾರಣಕ್ಕೆ ಈ ಆಕ್ರೋಶ ಅಷ್ಟೇ’ ಎಂದರು.