ಎಂಪಿಎಂ ಕಾರ್ಖಾನೆ ಪುನಶ್ಚೇತನಕ್ಕೆ ಗುತ್ತಿಗೆ ನವೀಕರಣ ಅನಿವಾರ್ಯ: ರಾಘವೇಂದ್ರ

ಸಾಗರ: ಭದ್ರಾವತಿಯ ಎಂಪಿಎಂ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಜಿಲ್ಲೆಯಲ್ಲಿ ನಿಗದಿಪಡಿಸಿದ ಅರಣ್ಯ ಹಾಗೂ ಕಂದಾಯ ಭೂಮಿಯಲ್ಲಿ ನೆಡುತೋಪು ಬೆಳೆಸಲು ಎಂಪಿಎಂಗೆ ನೀಡಿರುವ ಗುತ್ತಿಗೆಯನ್ನು ನವೀಕರಣಗೊಳಿಸುವುದು ಅನಿವಾರ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ಸ್ಪಷ್ಟಪಡಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಒಂದೆಡೆ ಕಸ್ತೂರಿರಂಗನ್ ವರದಿ ಜಾರಿ ಬೇಡ ಎನ್ನುವುದು, ಮತ್ತೊಂದೆಡೆ ಎಂಪಿಎಂಗೆ ನೀಡಿರುವ ಗುತ್ತಿಗೆ ನವೀಕರಿಸಬೇಡಿ ಎನ್ನುವುದು ದ್ವಂದ್ವ ನಿಲುವು ಆಗುತ್ತದೆ’ ಎಂದರು.
ಅಕೇಶಿಯಾದಲ್ಲಿ ವಿವಿಧ ಜಾತಿಗಳಿವೆ. ಪರಿಸರಕ್ಕೆ ಮಾರಕವಾಗುವ ಅಕೇಶಿಯಾ, ನೀಲಗಿರಿ ತಳಿಗಳ ಬದಲು ಪರಿಸರಕ್ಕೆ ಪೂರಕವಾಗುವ ಗಿಡಗಳನ್ನೊಳಗೊಂಡ ನೆಡುತೋಪು ನಿರ್ಮಿಸುವಂತೆ ನೋಡಿಕೊಳ್ಳಲಾಗುವುದು. ಎಂಪಿಎಂ ಕಾರ್ಖಾನೆಯೇ ಇದರ ನಿರ್ವಹಣೆ ವಹಿಸುತ್ತದೆ ಹೊರತು ಭೂಮಿಯನ್ನು ಯಾವುದೇ ಬಂಡವಾಳಶಾಹಿಗಳ ವಶಕ್ಕೆ ನೀಡುವುದಿಲ್ಲ ಎಂದು ತಿಳಿಸಿದರು.
ತಾಲ್ಲೂಕಿನ ಯಲಗಳಲೆ ಗ್ರಾಮದ ಸ.ನಂ. 105ರ 50 ಎಕರೆ ಪ್ರದೇಶದಲ್ಲಿ ನೂತನ ಪೊಲೀಸ್ ತರಬೇತಿ ಕೇಂದ್ರ ಆರಂಭಗೊಳ್ಳಲಿದೆ. ಲಿಂಗನಮಕ್ಕಿ ಸೇರಿ ರಾಜ್ಯದ ಪ್ರಮುಖ ಜಲಾಶಯ, ಸೇನಾ ಕೇಂದ್ರಗಳ ಭದ್ರತೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಈ ಕೇಂದ್ರದ ಮೇಲೆ ಇರಲಿದೆ ಎಂದರು.
ತಾಲ್ಲೂಕಿನ ತಾಳಗುಪ್ಪ ಹಾಗೂ ಇಲ್ಲಿನ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಸಾಗರದ ರೈಲ್ವೆ ನಿಲ್ದಾಣದಲ್ಲಿ ಎರಡನೇ ಪ್ಲಾಟ್ಫಾರ್ಮ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಇದು ಮುಕ್ತಾಯವಾದಲ್ಲಿ ಈಗ ಹೊರಡುತ್ತಿರುವ ರೈಲಿನ ಸಮಯವನ್ನು ಜನರ ಅನುಕೂಲಕ್ಕೆ ತಕ್ಕಂತೆ ಬದಲಿಸಲಾಗುವುದು ಎಂದು ಹೇಳಿದರು.
ರೈಲ್ವೆ ಕೋಚಿಂಗ್ ಟರ್ಮಿನಲ್ ಕೇಂದ್ರವನ್ನು ತಾಳಗುಪ್ಪ ಅಥವಾ ಕೋಟೆಗಂಗೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಈಗ ಕೋಟೆಗಂಗೂರಿನಲ್ಲಿ ಅದು ಕಾರ್ಯಾರಂಭ ಮಾಡುವುದು ಖಚಿತವಾಗಿದೆ. ಇದಕ್ಕೆ ಅಧಿಕಾರಿಗಳು ನೀಡಿರುವ ತಾಂತ್ರಿಕ ವರದಿ ಕಾರಣವೇ ಹೊರತು ರಾಜಕೀಯ ಕಾರಣಗಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೋಗದ ಅಭಿವೃದ್ಧಿಗೆ ₹ 160 ಕೋಟಿ ಮಂಜೂರಾಗಿದೆ. ಯಾವ ರೀತಿ ಜೋಗವನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಕುರಿತು ಚಿಂತನೆ ನಡೆದಿದೆ. ಸಾಗರದ ನ್ಯೂ ಬಿ.ಎಚ್. ರಸ್ತೆ ವಿಸ್ತರಣೆ ಕಾರ್ಯ ಶೀಘ್ರದಲ್ಲೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಶಾಸಕ ಎಚ್. ಹಾಲಪ್ಪ ಹರತಾಳು, ಟೂರಿಸಂ ಟಾಸ್ಕ್ಫೋರ್ಸ್ನ ಲಕ್ಷ್ಮೀನಾರಾಯಣ ಕಾಶಿ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ.ಮಹೇಶ್ ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.