ಶಿವಮೊಗ್ಗ: ‘ಈ ಬಾರಿಯ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಯ ಆಯ್ಕೆ ಪಟ್ಟಿ ಸಿದ್ಧವಾಗಿದ್ದು, ಮೈಸೂರಿನ ಅರಣ್ಯಭವನದಲ್ಲಿ ದಸರಾ ಆನೆಗಳ ಆಯ್ಕೆ ಕುರಿತು ಆ. 8ರಂದು ಅಂತಿಮ ಸಭೆ ನಡೆಯಲಿದೆ. ಸಭೆಯಲ್ಲಿ ಸಕ್ರೇಬೈಲು ಆನೆ ಬಿಡಾರದಿಂದ ಒಂದು ಅಥವಾ ಎರಡು ಆನೆಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮೈಸೂರಿನ ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್, ಜಿಲ್ಲೆಯ ಡಿಸಿಎಫ್, ಎಸಿಎಫ್, ಆರ್ಎಫ್ಒ ಹಲವರ ತಂಡ ಸೋಮವಾರ ಸಕ್ರೆಬೈಲುನಲ್ಲಿ ಆನೆಗಳ ಆರೋಗ್ಯ ತಪಾಸಣೆ ನಡೆಸಿದರು.
‘ಸಕ್ರೆಬೈಲು ಆನೆ ಶಿಬಿರದಲ್ಲಿ 20 ಸಾಕಾನೆಗಳಿವೆ. ದಶಕಗಳ ಹಿಂದೆ ಸಕ್ರೆಬೈಲಿನಿಂದ ಮೈಸೂರು ದಸರಾಗೆ ಆನೆಗಳನ್ನು ಕಳುಹಿಸಲಾಗುತ್ತಿತ್ತು. ಈ ಬಾರಿಯೂ ಒಂದೆರಡು ಆನೆ ಪಾಲ್ಗೊಳ್ಳುವ ಸಾಧ್ಯತೆ ಇದೆ’ ಎಂದು ತಿಳಿಸಿದರು.
‘ಹಿಂದಿನ ವರ್ಷ ದಸರಾಗೆ ಬಂದಿದ್ದ ಗೋಪಾಲಸ್ವಾಮಿ ಆನೆ ಮೃತಪಟ್ಟಿದೆ. ಆ ಆನೆ ಬದಲಿಗೆ ಹೊಸ ಆನೆ ಬರಲಿದೆ. ಇದಲ್ಲದೇ ದುರ್ಗಾಪರಮೇಶ್ವರಿ, ಬಲರಾಮ ಆನೆಗಳೂ ಈ ವರ್ಷದಲ್ಲೇ ಮೃತಪಟ್ಟಿವೆ. ಹಿಂದಿನ ಬಾರಿ ಬಂದಿದ್ದ ಲಕ್ಷ್ಮಿ ಆನೆ ಮರಿ ಹಾಕಿದೆ. ಇದರಿಂದ ಭೀಮ, ಮಹೇಂದ್ರ ಸೇರಿದಂತೆ ಹಿಂದಿನ ವರ್ಷ ತಂದಿದ್ದ ಆನೆಗಳನ್ನೂ ತರಲಾಗುತ್ತಿದೆ. ಇದರೊಟ್ಟಿಗೆ ಇನ್ನೂ ಮೂರ್ನಾಲ್ಕು ಹೊಸ ಆನೆಗಳ ಪಟ್ಟಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.