ವಿಶ್ವದ ಎಲ್ಲೆಡೆ ಕೋವಿಡ್ ಹಾವಳಿ ಇಟ್ಟಿದ್ದರೂ, ಶಿವಮೊಗ್ಗ ಹೊರವಲಯದ ಸಹ್ಯಾದ್ರಿ ಕಾಲೇಜು ಹತ್ತಿರದ ಹೆದ್ದಾರಿ ಬದಿ ನೆಲೆಸಿರುವ ಅಲೆಮಾರಿ ಕುಟುಂಬಗಳತ್ತ ಸೋಂಕು ಸುಳಿದಿಲ್ಲ. ನಿತ್ಯವೂ ಪೇಟೆ, ಹಳ್ಳಿ ತಿರುಗಿ ಕೂದಲು, ಏರ್ಪಿನ್, ಬಾಚಣಿಗೆ ಮಾರುವ ಇವರಿಗೆ ಪ್ರಕೃತಿಯೇ ಸಂರಕ್ಷಣೆ ಒದಗಿಸಿದೆ. ಶಿಳ್ಳೇಕ್ಯಾತ, ಸಿಂಧೋಳ್, ಸುಡುಗಾಡು ಸಿದ್ದರು, ದುರುಗಮುರುಗಿ ಇತ್ಯಾದಿ ಹೆಸರಿನಿಂದ ಕರೆಯುವ ಪರಿಶಿಷ್ಟ ಜಾತಿಗೆ ಸೇರಿದ 50ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಅಲ್ಲಿವೆ. ಈ ಕುಟುಂಬಗಳಲ್ಲಿ 190 ಜನರಿದ್ದಾರೆ. ಶೇ 70ರಷ್ಟು ಜನರು ಇಂದಿಗೂ ಮಾಸ್ಕ್ ಧರಿಸುವುದಿಲ್ಲ. ಶೇ 40ರಷ್ಟು ಸದಸ್ಯರು ಲಾಕ್ಡೌನ್ ಸಮಯದಲ್ಲೂ ಬಿದಿಬೀದಿ ತಿರುಗಿ ನಿತ್ಯದ ಕಾಯಕ ಮಾಡುತ್ತಿದ್ದಾರೆ.