ಶಿವಮೊಗ್ಗ: ನಗರದ ಬಿ.ಎಚ್ ರಸ್ತೆಯ ಶಿವಪ್ಪ ನಾಯಕ ಪ್ರತಿಮೆಯ ಆಸುಪಾಸಿನಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದ ಪೊಲೀಸರ ಕ್ರಮ ಖಂಡಿಸಿ ತಳ್ಳುವ ಗಾಡಿ ವ್ಯಾಪಾರಸ್ಥರು ಬುಧವಾರ ಮಾರಾಟಕ್ಕೆ ತಂದಿದ್ದ ಹೂವು ಹಣ್ಣುಗಳನ್ನು ರಸ್ತೆಗೆ ಎಸೆದು ಪೊಲೀಸರವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ತಿಂಗಳ ಹಿಂದೆ ಬೀದಿ ಬದಿ ವ್ಯಾಪಾರಸ್ಥರಿಂದ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಈ ಕಾರಣ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ಹಿಡಿದು ಬಿ.ಎಚ್.ರಸ್ತೆಯ ಶಿವಪ್ಪ ನಾಯಕ ಪ್ರತಿಮೆಯವರೆಗೆ ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಲಾಗಿತ್ತು.
ಆದರೆ, ವ್ಯಾಪಾರಸ್ಥರು ತಮ್ಮನ್ನು ತೆರವುಗೊಳಿಸಿರುವುದರಿಂದ ವ್ಯಾಪಾರವಿಲ್ಲದೆ, ಜೀವನ ನಡೆಸಲು ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು, ಇಲಾಖೆಗಳಿಗೆ ಮನವಿ ನೀಡಿದ್ದರು.
ಬದಲಿ ವ್ಯವಸ್ಥೆ: ವ್ಯಾಪಾರಸ್ಥರು ಸಾಕಷ್ಟು ಮನವಿ ನೀಡಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ತೆಗೆದು ಕೊಂಡಿರಲಿಲ್ಲ. ಆದರೆ ನಾಗರಾಜ್ ಕಂಕಾರಿ ಮಹಾನಗರ ಪಾಲಿಕೆ ಮೇಯರ್ ಆಗಿದ್ದಾಗ ಮತ್ತು ಈಚೆಗೆ ನಡೆದ ಪಾಲಿಕೆ ಸಭೆಯಲ್ಲಿ ಗಾಂಧಿ ಬಜಾರ್ ಬೀದಿ ಬದಿ ವ್ಯಾಪಾರಸ್ಥರಿಗೆ ಬದಲಿ ವ್ಯವಸ್ಥೆಯಾಗಿ ಕರ್ನಾಟಕ ಸಂಘದ ಮುರುಗನ್ ಬಿಲ್ಡಿಂಗ್ ಹಿಂಭಾಗದಲ್ಲಿ ಜಾಗ ಕಲ್ಪಿಸಬೇಕು ಎಂದು ತೀರ್ಮಾನಿಸಲಾಗಿತ್ತು.
ಈ ಜಾಗದಲ್ಲಿ ವ್ಯಾಪಾರ ನಡೆಸಲು ಇಷ್ಟಪಡದ ವ್ಯಾಪಾರಸ್ಥರು ಇಂದು ಏಕಾಏಕಿ ನಿಷೇಧಿತ ಜಾಗದಲ್ಲಿ ವ್ಯಾಪಾರ ಆರಂಭಿಸಲು ಯತ್ನಿಸಿದರು. ಆದರೆ ಪೊಲೀಸರು ಅಡ್ಡಿಪಡಿಸಿದ ಕಾರಣ ಕುಪಿತಗೊಂಡು ಅವರ ವಿರುದ್ಧ ಬೀದಿಗೆ ಇಳಿದು ಪ್ರತಿಭಟಿಸಿದರು.
ಮತ್ತೊಮ್ಮೆ ಸಭೆ ನಡೆಸಿ ನಿರ್ಧಾರ: ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಮತ್ತೊಮ್ಮೆ ಸಭೆ ನಡೆಸಿ ವ್ಯಾಪಾರಕ್ಕೆ ಸೂಕ್ತ ಜಾಗವನ್ನು ನಿಗದಿಪಡಿಸಲಾಗುವುದು. ಸಹಕರಿಸಬೇಕು ಎಂದು ವ್ಯಾಪಾರಸ್ಥರ ಮನವೊಲಿಸಲಾಯಿತು.