ಸೊರಬ: ಕೊರಾನಾ ನಿಯಂತ್ರಿಸುವ ಜೊತೆಗೆ ಸರ್ಕಾರ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಸಮರ್ಥ ಹೊಣೆಗಾರಿಕೆ ನಿರ್ವಹಿಸಬೇಕು.18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಎಂದು ಆಗ್ರಹಿಸಿ ಸಮಾಜ ಚಿಂತಕ ರಾಜಪ್ಪ ಮಾಸ್ತರ್ ತಮ್ಮ ಮನೆ ಎದುರು ಶನಿವಾರ ಕುಟುಂಬ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಿದರು.
ಸಮಗ್ರ ಪಡಿತರ ಹಂಚಿಕೆ, ಕೆಲಸ ಕಳೆದುಕೊಂಡವರಿಗೆ ಪರಿಹಾರ, ಆಮ್ಲಜನಕ ಪೂರೈಕೆ, ಬೆಡ್ ನೀಡಬೇಕು. ಕೊರಾನಾ ಎರಡನೇ ಅಲೆಗೆ ಜನರ ಬದುಕು ಅತಂತ್ರವಾಗಿದೆ. ಬಡವರು ಸೇರಿ ಮಧ್ಯಮ ವರ್ಗದ ಕುಟುಂಬಗಳಿಗೆ ಸಮಗ್ರವಾಗಿ ಪಡಿತರ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಕೋವಿಡ್ನಿಂದ ಕೆಲಸ ಕಳೆದುಕೊಂಡ ಕುಟುಂಬಗಳಿಗೆ ಕೂಡಲೇ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕೋವಿಡ್ ಆಸ್ಪತ್ರೆ ಕೇಂದ್ರಗಳಲ್ಲಿ ಸಮರ್ಪಕವಾದ ಆಮ್ಲಜನಕ, ರೋಗಿಗಳಿಗೆ ಬೆಡ್ ಹಾಗೂ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಜವಾಬ್ದಾರಿವುಳ್ಳ ಸರ್ಕಾರದ ಕರ್ತವ್ಯ ಉತ್ತಮ ಆಡಳಿತ ನೀಡುವುದು ಹಾಗೂ ಜನರ ಜೀವ ರಕ್ಷಣೆ ಮಾಡುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕೊರಾನಾ ನಿಯಂತ್ರಿಸುವಲ್ಲಿ ದಿಟ್ಟ ಹೆಜ್ಜೆ ಇಡಬೇಕಿದೆ ಎಂದು ಆಗ್ರಹಿಸಿದರು.