ಆನಂದಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇತ್ತೀಚೆಗೆ ನೇದರವಳ್ಳಿ ಗ್ರಾಮದ ರವಿ ಎಂಬುವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಅವರಿಗೆ ಆಸರೆಯಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ನಿಂತಿದ್ದಾರೆ.
ಎರಡು ದಿನಗಳ ಹಿಂದೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಸಾಂತ್ವನದ ಜೊತೆಗೆ ವೈಯಕ್ತಿಕ ಧನ ಸಹಾಯ ಮಾಡಿದ್ದರು. ಅಲ್ಲದೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಧನ ಸಹಾಯ ಮಾಡಿ, ಉಳಿದುಕೊಳ್ಳಲು ಅಂಗನವಾಡಿಯಲ್ಲಿ ವ್ಯವಸ್ಥೆ ಕಲ್ಪಿಸಿಕೊಟ್ಟರು.
ಇದರ ಜೊತೆಗೆ ವೈಯಕ್ತಿಕವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿ ದಿನ ಬಳಕೆಗೆ ಅವಶ್ಯಕವಾದ ಅಕ್ಕಿ ಬೆಳೆ ಸೆರಿದಂತೆ ವಿವಿಧ ವಸ್ತುಗಳನ್ನು ನೀಡಿದರು.
ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ ನಾಗಪ್ಪ ಮಾತನಾಡಿ, ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಸೂಚನೆ ಹಾಗೂ ಪ್ರೇರಣೆಯಿಂದ ಧನ ಸಹಾಯ ಮಾಡಲಾಗಿದೆ. ಅಲ್ಲದೆ ಅವರ ಹೊಸ ಮನೆಯ ನಿರ್ಮಾಣ ಕಾರ್ಯ ಅಪೂರ್ಣಗೊಂಡಿದ್ದು, ಕೆಲ ಸದಸ್ಯರು ಸೇರಿ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಚೌಡಪ್ಪ, ಹರೀಶ್ ಗೌಡ್ರು, ನಾಗರತ್ನ ಕಾರ್ಯದರ್ಶಿ ರಾಜು ಇದ್ದರು.