ಶಿವಮೊಗ್ಗ: ತಾಲ್ಲೂಕಿನ ಅಗಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟಿರುವ ಜಮೀನನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಮಾನವ ಸಂರಕ್ಷಣೆ ಹಾಗೂ ಪ್ರಜಾಸೇವಾ ಸಮಿತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸರ್ವೆ ನಂ. 167ರ ಪೈಕಿ 2033 ಎಕರೆ 30 ಗುಂಟೆ ಜಮೀನನ್ನು ಸರ್ಕಾರವು ಮುಳುಗಡೆ ಸಂತ್ರಸ್ತರಿಗೆ ಎಂದು ಮೀಸಲಿಟ್ಟಿದೆ. ಆದರೆ ಇತ್ತೀಚೆಗೆ ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ಜಮೀನನ್ನು ಸಾರ್ವಜನಿಕರಿಗೆ ಒಪ್ಪಂದದ ಮೂಲಕ ಮಾರಾಟ ಮಾಡಿ ಮುಳುಗಡೆ ಸಂತ್ರಸ್ತರನ್ನು ವಂಚಿಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಈ ಬಗ್ಗೆ ಮುಳುಗಡೆ ಸಂತ್ರಸ್ತರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ. ಸರ್ಕಾರಕ್ಕೆ ವಂಚನೆ ಮಾಡಿ ಸರ್ಕಾರದ ಜಮೀನನ್ನು ಮಾರಾಟಮಾಡಿ ಹಣ ಸಂಪಾದನೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಮಾರಾಟ ಮಾಡಿರುವ ನಿವೇಶನಗಳನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಟಿ. ಕಿರಣ್ಕುಮಾರ್ ಪವಾರ್, ಜಿಲ್ಲಾಧ್ಯಕ್ಷ ವಿ. ಅಶೋಕ್ ಕುಮಾರ್, ರಾಜ್ಯ ಕಾರ್ಯದರ್ಶಿ ಎಂ.ಬಿ. ಅಬ್ದುಲ್ ಲತೀಫ್, ಕೇಶವ್ ಮೂರ್ತಿ, ಎಚ್.ಎನ್. ಮಂಜುನಾಥ್, ಎಂ. ಸಿದ್ದೇಶ್ ಇದ್ದರು.