ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಾವತಿ ಮುಳುಗಡೆ ಸಂತ್ರಸ್ತರ ಬವಣೆಗೆ ದನಿ

ಮಧು ಬಂಗಾರಪ್ಪ ನೇತೃತ್ವದಲ್ಲಿ ಪಾದಯಾತ್ರೆ: ಆಯನೂರಿನಿಂದ ಶಿವಮೊಗ್ಗದತ್ತ ಹೆಜ್ಜೆ ಹಾಕಿದ ಜನಸ್ತೋಮ
Last Updated 29 ನವೆಂಬರ್ 2022, 6:20 IST
ಅಕ್ಷರ ಗಾತ್ರ

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಮುಂದಿಟ್ಟುಕೊಂಡು ತಾಲ್ಲೂಕಿನ ಆಯನೂರಿನಿಂದ ಶಿವಮೊಗ್ಗಕ್ಕೆ ಸೋಮವಾರ ಬೆಳಿಗ್ಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದಜನಾಕ್ರೋಶ ಪಾದಯಾತ್ರೆಗೆ ಭರ್ಜರಿ ಸ್ಪಂದನೆ ದೊರೆಯಿತು. ಸಾವಿರಾರು ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಶರಾವತಿ ಯೋಜನೆಯ ಮುಳುಗಡೆ ಸಂತ್ರಸ್ತರ ಕುಟುಂಬದವರು, ಕಾಂಗ್ರೆಸ್ ಪಕ್ಷದ ಸದಸ್ಯರು, ಪದಾಧಿಕಾರಿಗಳು ಹಾಗೂ ಮುಖಂಡರು ಮಧು ಬಂಗಾರಪ್ಪ ಅವರ ಜೊತೆಗೆ ಹೆಜ್ಜೆ ಹಾಕಿದ್ದು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲೆಡೆ ಕಾಂಗ್ರೆಸ್ ಪಕ್ಷದ ಧ್ವಜ, ಪಕ್ಷದ ನಾಯಕರ ಭಾವಚಿತ್ರಗಳು ರಾರಾಜಿಸಿದವು. ಪಕ್ಷದ ಗುರುತು ಇರುವ ಟೋಪಿ, ಟೀಶರ್ಟ್ ಧರಿಸಿದವರು ಗಮನ ಸೆಳೆದರು.

ಶಿವಮೊಗ್ಗ, ಆಯನೂರು, ಕುಂಸಿ ಭಾಗದಲ್ಲಿ ಭಾನುವಾರ ರಾತ್ರಿ ಸುರಿದ ಭರ್ಜರಿ ಮಳೆಯಿಂದ ವಾತಾವರಣ ತಂಪಾಗಿದ್ದು, ಆಗಾಗ ತುಂತುರು ಮಳೆ ದರ್ಶನ ನೀಡಿತು. ಕೆಲ ದಿನಗಳಿಂದ ಕಾಣಿಸಿದ್ದ ಬಿಸಿಲ ಬೇಗೆ ಮರೆಯಾಗಿ ಮೋಡ ಮುಚ್ಚಿದ ವಾತಾವರಣ ಹಾಗೂ ಹಸಿರು ಹೊದ್ದ ಕಾಡು ಹಾದಿ ಪಾದಯಾತ್ರಿಗಳ ನಡಿಗೆಗೆ ಉತ್ತೇಜನ ನೀಡಿದವು. ಮಧ್ಯಾಹ್ನದ ವೇಳೆಗೆ ಬಿಸಿಲಿನ ಕಾವು ಏರತೊಡಗಿತು. ಇದರಿಂದ ಪಾದಯಾತ್ರಿಗಳು ಬಸವಳಿ
ದರು. ಸಂತ್ರಸ್ತರ ಬವಣೆ ಬಿಂಬಿಸುವ ಹೋರಾಟದ ಹಾಡುಗಳು, ತಮಟೆ, ಡೊಳ್ಳಿನ ಸದ್ದು ಜೊತೆಯಾಗಿದ್ದವು.

ಆಯನೂರಿನ ಎಪಿಎಂಸಿ ಬಳಿಯ ಸಂತೆ ಮೈದಾನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪಾದಯಾತ್ರೆಗೆ ಚಾಲನೆ ನೀಡಿದರು. ಇಳಿ ವಯಸ್ಸಿನಲ್ಲೂ ಕಿಲೋಮೀಟರ್‌ನಷ್ಟು ದೂರ ಕಾಗೋಡು ತಿಮ್ಮಪ್ಪ ಹೆಜ್ಜೆ ಹಾಕಿದ್ದು, ಪಾದಯಾತ್ರಿಗಳಲ್ಲಿ ಉತ್ಸಾಹ ಮೂಡಿಸಿತು.

ಈ ವೇಳೆ ಪಕ್ಷ ಹಾಗೂ ನಾಯಕರ ಪರ ಜಯಘೋಷ ಮುಗಿಲು ಮುಟ್ಟಿತು. ಮಾಜಿ ಸಚಿವ ಕಿಮ್ಮನೆ ರತ್ನಾಕರ, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಕೆ.ಬಿ.ಪ್ರಸನ್ನಕುಮಾರ್, ಆರ್.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್‌.ಸುಂದರೇಶ ಪಾದಯಾತ್ರೆಯಲ್ಲಿ ಸಾಗಿ ಬಂದರು.

ಒಗ್ಗಟ್ಟು ಪ್ರದರ್ಶನ: ಪಾದಯಾತ್ರೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಆಗಿ ಬದಲಾಯಿತು. ನಾಯಕರು ಸಣ್ಣಪುಟ್ಟ ಮುನಿಸು ಮರೆತು ಒಟ್ಟಾಗಿ ಸಾಗಿ ಬಂದರು. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವವರ ಬಲ ಪ್ರದರ್ಶನಕ್ಕೂ ಆಯನೂರು–ಶಿವಮೊಗ್ಗ ನಡುವಿನ ಹಾದಿ ಸಾಕ್ಷಿಯಾಯಿತು. ಟಿಕೆಟ್ ಆಕಾಂಕ್ಷಿಗಳು ತಮ್ಮೊಂದಿಗೆ ಭಾರಿ ಸಂಖ್ಯೆಯಲ್ಲಿ ಬೆಂಬಲಿಗರನ್ನು ಕರೆತಂದಿದ್ದರು.

ಊಟೋಪಹಾರದ ವ್ಯವಸ್ಥೆ: ಬಾಡಿಗೆ ಬಸ್‌ಗಳಲ್ಲಿ ಆಯನೂರಿಗೆ ಬಂದಿದ್ದ ಸಂತ್ರಸ್ತರಿಗೆ ಅಲ್ಲಿನ ಸಂತೆ ಮೈದಾನದಲ್ಲಿ ಉಪ್ಪಿಟ್ಟು–ಕೇಸರಿ ಬಾತ್‌, ಚಹಾ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ನಾಷ್ಟಾ ಸವಿದು ನಾಯಕರೊಂದಿಗೆ ಹೆಜ್ಜೆ ಹಾಕಿದರು. ಮಧ್ಯಾಹ್ನ ಹೊರವಲಯದ ಶರಾವತಿ ಡೆಂಟಲ್ ಕಾಲೇಜು ಬಳಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಮುಗಿಸಿದ ಪಾದಯಾತ್ರಿಗಳು ಎನ್‌ಇಎಸ್‌ ಮೈದಾನದ ಸಮಾವೇಶದ ಸ್ಥಳಕ್ಕೆ ತೆರಳಿದರು. ಶಿವಮೊಗ್ಗ–ಸಾಗರ ಮುಖ್ಯರಸ್ತೆಯ ಒಂದು ಭಾಗದಲ್ಲಿ ಪಾದಯಾತ್ರಿಗಳ ನಡಿಗೆಗೆ ಅವಕಾಶ ಮಾಡಿಕೊಡಲಾಗಿತ್ತು.

ಅದು ಹೋರಾಟವಲ್ಲ, ಮತ ಬೇಟೆ: ಆರಗ

ಶಿವಮೊಗ್ಗ: ‘ಶರಾವತಿ ಮುಳುಗಡೆ ಸಂತ್ರಸ್ತರ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ನಡೆಸುತ್ತಿರುವುದು ಮತಗಳ ಬೇಟೆಯೇ ಹೊರತು ಹೋರಾಟವಲ್ಲ’ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಲೇವಡಿ ಮಾಡಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘60 ವರ್ಷ
ಗಳ ಕಾಲ ಅಧಿಕಾರದಲ್ಲಿದ್ದರೂ ಸಂತ್ರಸ್ತರ ಸಮಸ್ಯೆ ಬಗೆಹರಿಸದ ಕಾಂಗ್ರೆಸ್ ಅವರ ಪಾಲಿಗೆ ಇದ್ದೂ ಸತ್ತಂತಾಗಿದೆ. ಅವರ ಅವಧಿಯಲ್ಲಿ ಕೇಂದ್ರದ ಅನು
ಮತಿ ಪಡೆಯದೇ ಮಂಜೂರಾತಿ ಮಾಡಲು ಅರಣ್ಯ ಭೂಮಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಅದನ್ನು ಸರಿಪಡಿಸಲು ಮುಂದಾಗಿದ್ದೇವೆ’ ಎಂದು ಹೇಳಿದರು.

ಅರಣ್ಯಭೂಮಿ ಮಂಜೂರಾತಿ ರದ್ದು ಪ್ರಶ್ನಿಸಿ ಈಗ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜ್ಞಾನೇಂದ್ರ, ‘ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಸಂತ್ರಸ್ತರಿಗೆ ಮಂಜೂರಾತಿ ಮಾಡಿರುವ ಅರಣ್ಯ ಭೂಮಿಯ ಜಂಟಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ’ ಎಂದರು.

ಪಾದಯಾತ್ರೆಯಲ್ಲಿ ಸಾಗಿಬಂದ ಪ್ರಮುಖರು

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಚ್.ಅನಿತಾಕುಮಾರಿ, ಕಾಗೋಡು ತಿಮ್ಮಪ್ಪ ಪುತ್ರಿ ಡಾ. ರಾಜನಂದಿನಿ, ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ, ಮುಖಂಡರಾದ ಶ್ರೀನಿವಾಸ ಕರಿಯಣ್ಣ, ಇಸ್ಮಾಯಿಲ್‌ ಖಾನ್‌, ಜಿ.ಪಲ್ಲವಿ, ಬಲದೇವಕೃಷ್ಣ, ಕಲಗೋಡು ರತ್ನಾಕರ, ಎಸ್‌.ಕೆ.ಮರಿಯಪ್ಪ, ಗೋಣಿ ಮಾಲತೇಶ, ನಗರದ ಮಹಾದೇವಪ್ಪ, ಎನ್. ರಮೇಶ್‌, ಎಚ್.ಸಿ.ಯೋಗೀಶ್, ಕೆ.ದೇವೇಂದ್ರಪ್ಪ, ರಮೇಶ ಇಕ್ಕೇರಿ, ಜಿ.ವಿಜಯಕುಮಾರ್, ಜಿ.ಡಿ.ಮಂಜುನಾಥ್‌, ಯುವ ಕಾಂಗ್ರೆಸ್‌ನ ಮುಖಂಡ ಎಸ್.ಎಂ.ಶರತ್, ಮಧುಸೂದನ್‌ ಅವರು ಮಧು ಅವರಿಗೆ ಸಾಥ್ ನೀಡಿದರು.

ಬರಿಗಾಲಲ್ಲಿ ಹೆಜ್ಜೆ ಹಾಕಿದರು..

ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ನಡೆದ ಪಾದಯಾತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ಅವರು ಆಯನೂರಿನಿಂದ ಶಿವಮೊಗ್ಗದವರೆಗೆ ಬರಿಗಾಲಿನಲ್ಲಿ ನಡೆದುಕೊಂಡು ಬಂದು ಗಮನ ಸೆಳೆದರು.

ಶರಾವತಿ ಸಂತ್ರಸ್ತರ ಬಹಳ ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದೇವೆ. ಈಗ 70 ವರ್ಷಗಳ ಜಮೀನು ದಾಖಲೆ ಕೇಳುತ್ತಿದ್ದಾರೆ. ಎಲ್ಲಿಂದ ತರೋದು.

–ಮೊಹಮ್ಮದ್ ಕಬೀರ್, ಸೊರಬ

ನಮಗೆ ಜಮೀನಿನ ಹಕ್ಕುಪತ್ರ ಕೊಡಲು ಸರ್ಕಾರಕ್ಕೆ ಒತ್ತಾಯಿಸಿ ಇಲ್ಲಿ ಹೋರಾಟಕ್ಕೆ ಬಂದಿದ್ದೇವೆ.

–ಸುಧಾಕರ, ಸೊರಬ ನಿವಾಸಿ

ಶರಾವತಿ ಸಂತ್ರಸ್ತರ ಬಗ್ಗೆ ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ವಸ್ತುಸ್ಥಿತಿ ಮನವರಿಕೆ ಮಾಡಿಲ್ಲ. ತನ್ನ ವೈಫಲ್ಯದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭೂಮಿ ಮಂಜೂರಾತಿಯನ್ನು ರದ್ದು ಮಾಡಿದೆ.

–ಕಾಗೋಡು ತಿಮ್ಮಪ್ಪ, ಮಾಜಿ ಸಚಿವ

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಲೆನಾಡಿಗರಿಗೆ ಬದುಕು ಕಟ್ಟಿಕೊಟ್ಟಿತ್ತು. ಬಿಜೆಪಿ ಸರ್ಕಾರ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸಂತ್ರಸ್ತರಿಗೆ ಭೂಗಳ್ಳರು ಎಂಬ ಹಣೆಪಟ್ಟಿ ಕಟ್ಟಿದೆ.

ಮಧು ಬಂಗಾರಪ್ಪ, ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT