ಸಾಗರ: ತಾಲ್ಲೂಕಿನಲ್ಲಿ ಸರ್ವೆಯರ್ಗಳ ಕೊರತೆ ಇರುವುದು ಬಗರ್ಹುಕುಂ ಕಾಯ್ದೆಯಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವಲ್ಲಿ ವಿಳಂಬವಾಗಿದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.
ಶರಾವತಿ ಹಿನ್ನೀರಿನ ಭಾಗದ ಬಗರ್ ಹುಕುಂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಸಂಬಂಧ ಇಲ್ಲಿ ಸೋಮವಾರ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಗರ್ಹುಕುಂ ಕಾಯ್ದೆಯಡಿ ಹಕ್ಕುಪತ್ರ ವಿತರಿಸಲು ಅನೇಕ ಭಾಗಗಳಲ್ಲಿ ಕೃಷಿಭೂಮಿಯ ಸರ್ವೆ ಕಾರ್ಯ ನಡೆಯಬೇಕಿದೆ. ಆದರೆ ಸರ್ವೆಯರ್ ಕೊರತೆ ಇರುವುದರಿಂದ ಈ ಕೆಲಸ ಸಕಾಲದಲ್ಲಿ ಆಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸಿ ಕೊರತೆ ಇರುವ ಸರ್ವೆಯರ್ ನೇಮಕಾತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಶರಾವತಿ ಹಿನ್ನೀರಿನ ಪ್ರದೇಶದಲ್ಲಿರುವವರಿಗೆ ಭೂಮಿಯ ಹಕ್ಕುಪತ್ರ ನೀಡುವ ಕೆಲಸ ತುರ್ತಾಗಿ ಆಗಬೇಕಿದೆ. ತಾಲ್ಲೂಕಿನಲ್ಲಿ ಸುಮಾರು 6 ಸಾವಿರ ಬಗರ್ಹುಕುಂ ಅರ್ಜಿ ಬಾಕಿ ಇದೆ. ತಾಂತ್ರಿಕ ಕಾರಣಗಳಿಂದಾಗಿ ಅನೇಕ ಭಾಗಗಳಲ್ಲಿನ ಅರ್ಜಿ ವಿಲೇ ಮಾಡಲು ತೊಡಕು ಉಂಟಾಗಿದೆ. ಇವುಗಳನ್ನು ನಿವಾರಿಸುವ ಜವಾಬ್ದಾರಿ ಅಧಿಕಾರಿಗಳ ಮೇಲೆ ಇದೆ ಎಂದರು.
ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್, ಸರ್ವೆ ಇಲಾಖೆಯ ಗೋಪಿನಾಥ್, ಮಂಜಯ್ಯ ಜೈನ್ ಇದ್ದರು.