ಶಿವಮೊಗ್ಗ: ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಶನಿವಾರ ಗೋಪಾಲಗೌಡ ಬಡಾವಣೆ ಪೆಟ್ರೋಲ್ ಬಂಕ್ ಎದುರು ಪ್ರತಿಭಟಿಸಲಾಯಿತು.
ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರ ಮುಗಿಯುತ್ತಿಲ್ಲ. ಇಲ್ಲಿನ ಅವೈಜ್ಞಾನಿಕ ಕಾಮಗಾರಿಗಳಿಂದಾಗಿಯೇ ನಗರದಲ್ಲಿ ಸಣ್ಣ ಮಳೆಯಾದರೆ ಸಾಕು, ಜನವಸತಿಗಳು ಜಲಾವೃತಗೊಳ್ಳುತ್ತವೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ಹರಿದು ಸಂಚಾರಕ್ಕೆ ತೊಂದರೆಯಾಗುತ್ತದೆ. ಅನೇಕ ಕಡೆ ಕಾಮಗಾರಿ ಪೂರ್ಣಗೊಂಡಿದ್ದರೂ, ಕಾಮಗಾರಿ ಮುಗಿದ ಕಡೆಯಲ್ಲಿನ ಫುಟ್ಪಾತ್ಗಳನ್ನು ಮತ್ತೆ ಮತ್ತೆ ತೆಗೆದು ದುರಸ್ತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಗುತ್ತಿಗೆದಾರಯಾರು ಎಂದು ಗೊತ್ತಾಗುವುದಿಲ್ಲ. ಯಾರೋ ಬರುತ್ತಾರೆ. ಅಧಿಕಾರಿಗಳು ಕೆಲಸ ನೋಡದೇ ಶಿಫಾರಸು ಮಾಡುತ್ತಾರೆ. ಆತ ಹಣ ಬಾಚಿಕೊಳ್ಳುತ್ತಾನೆ. ಕೆಲಸ ಮಾತ್ರ ಅಸ್ತವ್ಯಸ್ಥವಾಗಿರುತ್ತದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಜನಪ್ರತಿನಿಧಿಗಳಿಗೂ ದೂರು ನೀಡಲಾಗಿದೆ. ಇಷ್ಟಾದರೂ ಅವ್ಯವಸ್ಥೆ ಮುಂದುವರಿದಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣವೇ ಅಗತ್ಯ ಕ್ರಮ ಕೈಗೊಂಡು ಅವೈಜ್ಞಾನಿಕ ಕಾಮಗಾರಿಗಳಿಂದಾಗುವ ತೊಂದರೆ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.
ಒಕ್ಕೂಟದ ಪದಾಧಿಕಾರಿಗಳಾದ ಕೆ.ವಿ. ವಸಂತಕುಮಾರ್, ಸತೀಶ್ ಕುಮಾರ್ ಶೆಟ್ಟಿ, ಎಸ್.ಬಿ. ಅಶೋಕ್ ಕುಮಾರ್, ಜಿ.ಡಿ. ಮಂಜುನಾಥ್, ಸೀತಾರಾಮು ಇದ್ದರು.