ಸಾಗರ: ಕಾಕಾಲ್ ಸಂಸ್ಥೆಯು ಶಿರಸಿಯ ತೋಟಗಾರ್ಸ್ ಸೊಸೈಟಿ ಯ ಸಹಯೋಗದೊಂದಿಗೆ ಹೆಗ್ಗೋಡು ಗ್ರಾಮದ ಸಮೀಪ ಸೂಪರ್ ಮಾರ್ಕೆಟ್ ಆರಂಭಿಸು ತ್ತಿದೆ ಎಂದು ಇನ್ಫೊಸಿಸ್ ನಿವೃತ್ತ ಅಧಿಕಾರಿ ಹಾಗೂ ಕಾಕಾಲ್ ಸಂಸ್ಥೆಯ ಪ್ರಮುಖರಾದ ಚಂದ್ರ ಶೇಖರ್ ಕಾಕಾಲ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಗ್ರಾಮೀಣ ಪ್ರದೇಶವೊಂದರಲ್ಲಿ ಸೂಪರ್ ಮಾರ್ಕೆಟ್ ಇದೇ ಮೊದಲ ಬಾರಿಗೆ ಆರಂಭವಾಗುತ್ತಿದೆ. ಹಳ್ಳಿಯ ಜನರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಹಳ್ಳಿಯಲ್ಲೇ ಖರೀದಿಸಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಮಾರ್ಕೆಟ್ ತೆರೆಯಲಾಗುತ್ತಿದೆ’ ಎಂದು ತಿಳಿಸಿದರು.
ಸೂಪರ್ ಮಾರ್ಕೆಟ್ನಲ್ಲಿ ದಿನ ಬಳಕೆಯ ವಸ್ತುಗಳ ಜತೆಗೆ ಕೃಷಿ ಪರಿಕರಗಳು ಕೂಡ ಲಭ್ಯವಿರುತ್ತವೆ. ಅಲ್ಲದೆ ಕೃಷಿಗೆ ಸಂಬಂಧಿಸಿದ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಸಂವಾದಗಳನ್ನು ನಡೆಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಭವಿಷ್ಯದಲ್ಲಿ ಅಡಿಕೆ ಖರೀದಿ ಕೇಂದ್ರ ಆರಂಭಿಸುವ ಯೋಜನೆಯೂ ಇದೆ ಎಂದರು.
ಗ್ರಾಮೀಣ ಪ್ರದೇಶದ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದಲೂ ನೂತನ ಸಂಸ್ಥೆ ಆರಂಭಿಸಲಾಗುತ್ತಿದೆ. ಕಾಕಾಲ್ ಕಾಲೇಜಿನಲ್ಲಿ ಕಲಿತಿರುವ ವಿದ್ಯಾರ್ಥಿಗಳಿಗೆ ಇಲ್ಲಿ ಉದ್ಯೋಗಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಕಾಕಾಲ್ ಸಂಸ್ಥೆಯ ಗಣೇಶ್ ಕಾಕಾಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.