ಸೊರಬ: ನೆಮ್ಮದಿ ಜೀವನಕ್ಕೆ ಶರಣರ ಚಿಂತನೆ ಅಗತ್ಯ. ಈ ಬಗ್ಗೆ ಪ್ರತಿಯೊಬ್ಬರಲ್ಲಿ ಅರಿವು ಬೇಕು. ಒಳ್ಳೆಯ ವಿಚಾರ ಹಾಗೂ ಮೌಲ್ಯವನ್ನುತಿಳಿದುಕೊಳ್ಳಬೇಕು ಎಂದು ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿಹೇಳಿದರು.
ಶನಿವಾರ ಪಟ್ಟಣದ ಮುರುಘಾ ಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಹಾಗೂ ಜಡೆ ಸಂಸ್ಥಾನ ಮಠದ ಸಹಯೋಗದಲ್ಲಿ ಹಮ್ಮಿಕೊಂಡಿದ ದತ್ತಿ ನಿಧಿ ಹಾಗೂ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ಅಂಧಾನುಕರಣೆ ಹಾಗೂ ಮೌಢ್ಯಗಳ ವಿರುದ್ಧ ಜ್ಞಾನದ ಅರಿವನ್ನು ಮಾನವರಿಗೆ ಮೂಡಿಸುವಲ್ಲಿ ಶರಣರ ಆಧ್ಯಾತ್ಮಿಕ ಅನುಭಾವಿಕ ಚಿಂತನೆಗಳು ಅತ್ಯಗತ್ಯ. ಅಜ್ಞಾನದ ಅಂಧಕಾರ ದೂರ ಮಾಡಿ ಸುಜ್ಞಾನದ ಚಿಂತನೆಯನ್ನು ಮಾನವರಲ್ಲಿ ಮೂಡಿಸುವ ಕಾಯಕಕ್ಕೆ ಶರಣರ ಚಿಂತನೆಗಳು ದಾರಿದೀಪ. ಅನುಭಾವಿಕ ಆಧ್ಯಾತ್ಮಿಕ ಮೌಲ್ಯಗಳಿಗೆ ಅಪಾರವಾದ ಪ್ರಾಶಸ್ತ್ಯ ನೀಡುವುದು ಮತ್ತು ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಪವಿತ್ರವಾದ ಸಂಸ್ಕಾರಕ್ಕೆ ಕಾರಣೀಭೂತರಾಗಬೇಕು. ಏಕ ದೇವೋಪಾಸನೆಯಿಂದ ಧರ್ಮದ ಜ್ಞಾನದ ಗುರಿಯನ್ನು ತಲುಪಲು ಸಾಧ್ಯ ಎಂದು ತಿಳಿಸಿದರು.
ಬಸವದಳ ಸಂಚಾಲಕ ಮಹಾಂತೇಶ ಅವರು ‘ಬಸವಾದಿ ಶರಣರ ಸಾಧನ ಕ್ಷೇತ್ರವಾಗಿ ಬಸವಕಲ್ಯಾಣ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯಗೌಡ ಅಧ್ಯಕ್ಷತೆ ವಹಿಸಿದ್ದರು. ಅಶೋಕ ನಾಯಕ್ ಅಂಡಗಿ, ಡಾ.ಜ್ಞಾನೇಶ್, ಫಣಿರಾಜಪ್ಪ, ಶಿವಯೋಗಿ, ಕೃಷ್ಣಾನಂದ, ಶಿಕ್ಷಕಿ ಶಿವಲೀಲಾ, ಜಯಮಾಲಾ, ಸುನಂದಾ, ಶಾಂತಾ ಗೌಡರ್, ಪ್ರವೀಣ್ ಭಂಡಾರಿ, ರೂಪಾ, ಶಾಂತಮ್ಮ ಇದ್ದರು.