ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಜನ್ಮದಿನಕ್ಕೆ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ವಿಶೇಷ ಹಾಡು

Last Updated 28 ಫೆಬ್ರುವರಿ 2021, 5:48 IST
ಅಕ್ಷರ ಗಾತ್ರ

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನ ಅಂಗವಾಗಿ ಅವರನ್ನು ಕುರಿತು ಒಂದು ವಿಶೇಷ ಹಾಡನ್ನು ಫೆ.28ರಂದು ನಡೆಯಲಿರುವ ‘ನಮ್ಮೊಲುಮೆಯ ಅಭಿನಂದನೆ’ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ಗಾಯಕ ವಿಜಯಪ್ರಕಾಶ್ ಹೇಳಿದರು.

‘ಈ ಹಾಡನ್ನು ಖ್ಯಾತ ಗೀತರಚನೆಕಾರ ಕೆ.ಕಲ್ಯಾಣ್ ರಚಿಸಿದ್ದು, ನಾನೇ ಸಂಗೀತ ನೀಡಿದ್ದೇನೆ. ರಾಜೇಶ್ ಕೃಷ್ಣನ್ ಅವರ ಜೊತೆ ಸೇರಿಕೊಂಡು ನೃತ್ಯ ತಂಡದೊಂದಿಗೆ ಭಾವಾಭಿನಯದ ಮೂಲಕ ಮುಖ್ಯಮಂತ್ರಿಗಳಿಗೆ ಅರ್ಪಣೆ ಮಾಡಲಾಗುವುದು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿಯೇ ದೊಡ್ಡ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮ ಇದಾಗಿದ್ದು, ಸುಮಾರು ಆರು ನಿಮಿಷಗಳ ಅವಧಿಯಲ್ಲಿ ಹಾಡನ್ನು ಪ್ರಸ್ತುತ ಪಡಿಸಲಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರು ಇದುವರೆಗೂ ಬೆಳೆದು ಬಂದ ರೀತಿ, ಅವರ ಅಭಿವೃದ್ಧಿ ಕಾರ್ಯಗಳು, ಮಾನವೀಯತೆ, ಹೋರಾಟ ಹೀಗೆ ಅವರ ಸಮಗ್ರ ಚಿತ್ರಣ ಈ ಆರು ನಿಮಿಷದ ಹಾಡಿನಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇವೆ. ಹಾಗಾಗಿ ಇಡೀ ಕಾರ್ಯಕ್ರಮದಲ್ಲಿ ಈ ಹಾಡು ಹೈಲೈಟ್ ಆಗಲಿದೆ. 75ಕ್ಕೂ ಹೆಚ್ಚು ಕಲಾವಿದರು ಈ ದಿನವೇ ಶಿವಮೊಗ್ಗಕ್ಕೆ ಬಂದಿದ್ದು, ಪೂರ್ವ ತಯಾರಿ ಕೂಡ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಗಾಯಕ ರಾಜೇಶ್ ಕೃಷ್ಣನ್ ಮಾತನಾಡಿ, ‘ಕಲಾವಿದರಿಗೆ ಮುಖ್ಯಮಂತ್ರಿಗಳು ಕೊಡುವ ಗೌರವ ಎಂದೇ ಇದನ್ನು ಭಾವಿಸಿದ್ದೇವೆ. ಸಂಗೀತಕ್ಕೂ ಸೆಳೆತವಿದೆ ಎಂಬುದನ್ನು ನಾವು ಮೊದಲ ಬಾರಿಗೆ ತಿಳಿದುಕೊಂಡಿದ್ದೇವೆ. ಈ ಕಾರ್ಯಕ್ರಮವನ್ನು ಆಯೋಜಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿರುವುದು ನಮಗಂತೂ ತುಂಬಾ ಖುಷಿಯಾಗಿದೆ. ನಮ್ಮ ಜೊತೆಗೆ ಖ್ಯಾತ ನಿರೂಪಕಿ ಅನುಶ್ರೀ ಕೂಡ ಇರುತ್ತಾರೆ. ಎಲ್ಲರೂ ಸೇರಿ ಬಂದು ಸಂಗೀತದ ಕಡಲಿನಲ್ಲಿ ತೇಲಿಸುವ ಪ್ರಯತ್ನ ಮಾಡುತ್ತೇವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಬಳ್ಳೇಕೆರೆ ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT