ತೀರ್ಥಹಳ್ಳಿ: 70 ವರ್ಷಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಮೂರು ಕಾಸಿನ ಕೆಲಸ ಮಾಡಿಲ್ಲ. ಶರಾವತಿ ಸಂತ್ರಸ್ತರ ಹೆಸರಲ್ಲಿ ಓಟಿಗಾಗಿ ಪೊಳ್ಳು ಜಾಥಾಮಾಡಲಾಗುತ್ತಿದೆ. ಎಲೆಚುಕ್ಕಿ ರೋಗಕ್ಕೆ ಕಾಲ್ನಡಿಗೆ ಮದ್ದಲ್ಲ ಎಂದುಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ವಿಧಾನಸಭಾ ಕ್ಷೇತ್ರದ ₹ 618 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಲೆಚುಕ್ಕಿ ರೋಗ ಬಾಧಿತ ರೈತರು ಗಾಬರಿಗೊಳ್ಳುವುದು ಬೇಡ. ₹ 10 ಕೋಟಿ ಪರಿಹಾರ ಮಂಜೂರಾಗಿದೆ ಎಂದರು.
‘ತೀರ್ಥಹಳ್ಳಿ ಸಾಹಿತ್ಯ, ಪ್ರಾಮಾಣಿಕ ರಾಜಕಾರಣದಲ್ಲಿ ಮುಂದಿದ್ದು, ಅಂತಹ ಪರಂಪರೆ ಮುಂದುವರಿಸಿರುವ ತೃಪ್ತಿ ನನಗಿದೆ. ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಮೊತ್ತದ ಹಣ ಹರಿದು ಬಂದಿದೆ. ಪ್ರತಿಮನೆಗೂ ಶುದ್ಧ ನೀರು ಕಲ್ಪಿಸುವ ಉದ್ದೇಶದಿಂದ ₹ 564 ಕೋಟಿ ಅನುದಾನ ಕಲ್ಪಿಸಲಾಗಿದೆ ಎಂದರು.
ಗೃಹ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ’ಎಂದು ಸಮರ್ಥಿಸಿಕೊಂಡರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಇದ್ದರು.
ಅಧಿಕಾರದ ಹಗಲು ಗನಸು ಕಾಣುತ್ತಿರುವ ಪ್ರತಿಪಕ್ಷ: ಯಡಿಯೂರಪ್ಪ
‘ತೀರ್ಥಹಳ್ಳಿಗೆ ಹಲವು ಬಾರಿ ಬಂದಿದ್ದೇನೆ. ಈ ಮಟ್ಟಿನ ಜನಸ್ತೋಮಹಿಂದೆಂದೂ ಕಂಡಿರಲಿಲ್ಲ. ರಾಜ್ಯ ಸರ್ಕಾರದ ಅಭಿವೃದ್ಧಿ ಜನರನ್ನು ಸೆಳೆಯುತ್ತಿದೆ. ಪ್ರತಿಪಕ್ಷ ಅಧಿಕಾರದ ಹಗಲು ಗನಸು ಕಾಣುತ್ತಿದೆ. ಆರಗ ಜ್ಞಾನೇಂದ್ರ 50 ಸಾವಿರ ಅಂತರದಲ್ಲಿ ಗೆಲ್ಲುವುದು ನಿಶ್ಚಿತ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಎರಡು ತಿಂಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಆರಂಭಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು.