ತೀರ್ಥಹಳ್ಳಿ: ಅಮಲು ಪದಾರ್ಥ ಮಿಶ್ರಿತ ಬ್ರೆಡ್ ತಿನ್ನಿಸಿ ಜಾನುವಾರು ಕಳವು ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಗಿ ಕ್ರಮಕ್ಕೆ ಮುಂದಾಗಿದ್ದಾರೆ.
ಸಮೀಪ ಮೇಲಿನಕುರುವಳ್ಳಿಯಲ್ಲಿ ಈಚೆಗೆ ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಿನ ಕುರುವಳ್ಳಿಯ ಸುಬ್ರಮಣ್ಯ ಕುಲಾಲ್ ಹಾಗೂ ಸ್ನೇಹಿತರು ತೀರ್ಥಹಳ್ಳಿ ಪೊಲೀಸರಿಗೆ ಶನಿವಾರ ದೂರು ನೀಡಿದ್ದರು.
ಜೂನ್ 10ರಂದು ಮೇಲಿನಕುರುವಳ್ಳಿಯಲ್ಲಿ ರಾತ್ರಿ 2ಗಂಟೆ ಅವಧಿಯಲ್ಲಿ ಜಾನುವಾರುಗಳನ್ನು ಬಿಳಿ ರಿಡ್ಜ್ ಕಾರಿಗೆ ತುಂಬಿಸಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಒಂದೇ ದಿನ ಐದು ಜಾನುವಾರು ಕಳವಾಗಿದೆ ಎಂದು ದೂರುದಾರ ಸುಬ್ರಮಣ್ಯ ತಿಳಿಸಿದ್ದಾರೆ.
ಪ್ರಕರಣವನ್ನು ಫೇಸ್ಬುಕ್ನಲ್ಲಿ ಬಹಿರಂಗಗೊಳಿಸುತ್ತಿದ್ದಂತೆ ಎಚ್ಚೆತ್ತು ಕೊಂಡ ದುಷ್ಕರ್ಮಿಗಳು ಮತ್ತೆರಡು ದಿನ ಜಾನುವಾರು ಕಳವಿಗೆ ಪ್ರಯತ್ನಿಸಲಿಲ್ಲ. ಆದರೆ, ಜೂನ್ 17ರಂದು ಬೆಳಗಿನ ಜಾವ 4.40ಕ್ಕೆ ಮತ್ತೆ ಎರಡು ಜಾನುವಾರುಗಳನ್ನು ಕಳವು ಮಾಡಲಾಗಿದೆ ಎಂದು ತಿಳಿಸಿದರು.
ದುಷ್ಕರ್ಮಿಗಳು ನೀಡಿದ ಬ್ರೆಡ್ ತಿಂದ ಬಳಿಕ ಜಾನುವಾರು ಪ್ರಜ್ಞೆ ಕಳೆದುಕೊಳ್ಳುತ್ತವೆ. ಅವುಗಳಿಗೆ ನಿಲ್ಲಲು ಆಗುವುದಿಲ್ಲ. ಇದೇ ಸಂದರ್ಭ ಬಳಸಿ ಜಾನುವಾರುಗಳನ್ನು ಕಳವು ಮಾಡಲಾಗುತ್ತಿದೆ ಎಂದು ದೂರಿದರು.
20ಕ್ಕೂ ಹೆಚ್ಚು ಜಾನುವಾರು ಕಳವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಮೆರಾ ಫುಟೇಜ್ಗಳು ದೊರೆತಿದೆ ಎಂದು ತಿಳಿಸಿದ್ದಾರೆ.
‘ಜಾನುವಾರು ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ದುಷ್ಕರ್ಮಿಗಳನ್ನು ಸೆರೆಹಿಡಿಯಲು ಸ್ಥಳೀಯರ ನೆರವು ಪಡೆಯಲಾಗಿದೆ. ಸಾಗಾಟ ಮಾರ್ಗದ ಚೆಕ್ ಪೋಸ್ಟ್ನಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಲಾಗುವುದು’ ಎಂದು ಸಿಪಿಐ ಸುರೇಶ್ ತಿಳಿಸಿದ್ದಾರೆ.