ಸಾಗರ: ಇಲ್ಲಿನ ನಾಟ್ಯತರಂಗ ಟ್ರಸ್ಟ್ ನವದೆಹಲಿಯ ಭಾರತೀಯ ಸಾಂಸ್ಕೃತಿಕ ನಿರ್ದೇಶನಾಲಯದ ಸಹಯೋಗದೊಂದಿಗೆ ಮಾರ್ಚ್ 30 ಹಾಗೂ 31ರಂದು ಸಂಜೆ 5.30ಕ್ಕೆ ಶ್ರೀನಗರ ಬಡಾವಣೆಯಲ್ಲಿರುವ ನೃತ್ಯಭಾಸ್ಕರ ಸಭಾಂಗಣದಲ್ಲಿ ವಿಶೇಷ ನೃತ್ಯರೂಪಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮಾರ್ಚ್ 30ರಂದು ಜೋಷಿ ಫೌಂಡೇಷನ್ನ ಅಬಸೆ ದಿನೇಶ್ಕುಮಾರ್ ಜೋಷಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ನಾಟ್ಯತರಂಗದ ಪ್ರಮುಖರಾದ ವಿದ್ವಾನ್ ಜಿ.ಬಿ.ಜನಾರ್ದನ್ ತಿಳಿಸಿದ್ದಾರೆ.
ನಂತರ ನಾಟ್ಯತರಂಗ ಸಂಸ್ಥೆಯಿಂದ ‘ಇದಂ ಬ್ರಾಹ್ಮ್ಯಂ ಇದಂ ಕ್ರಾತ್ರಂ’ ಎಂಬ ನೃತ್ಯರೂಪಕ ಆಯೋಜಿಸಲಾಗಿದೆ. ಭಾರತದ ಪುರಾಣದಲ್ಲಿ ವಿಶಿಷ್ಟ ಪಾತ್ರವಾಗಿರುವ ಪರಶುರಾಮನ ಪಾತ್ರವನ್ನು ಈ ರೂಪಕ ಆಧರಿಸಿದೆ ಎಂದು ಅವರು ಹೇಳಿದರು.
31ರಂದು ವಿದುಷಿ ಅರಭಿ ಐತುಮನೆ ಅವರಿಂದ ‘ದಾಸರು ಕಂಡ ಬಾಲಕೃಷ್ಣ’ ಎಂಬ ವಿಶೇಷ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ನೃತ್ಯರೂಪಕದಲ್ಲಿ 18 ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಭಾವಸಾಗರದ ರಾಜಶೇಖರ ಮೂರ್ತಿ, ನವದೆಹಲಿಯ ಸಿ.ಸಿ.ಆರ್.ಟಿಯ ಗೀತಾ ಹಾಜರಿರುತ್ತಾರೆ ಎಂದರು.