ಶಿಕಾರಿಪುರ: ನಮ್ಮ ವೃತ್ತಿಯ ಜತೆಗೆ ಸಮಾಜ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಮಾಜದ ಏಳಿಗೆಗಾಗಿ ಏನಾದರೂ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಬೇಕು ಎಂದು ಶಿವಮೊಗ್ಗ-ಚಿಕ್ಕಮಂಗಳೂರು ಮಲೆನಾಡು ಮುದ್ರಕರ ಸಂಘದ ಜಿಲ್ಲಾ ಅಧ್ಯಕ್ಷ ಎಂ. ಮಾಧವಚಾರ್ ಹೇಳಿದರು.
ಪಟ್ಟಣದ ಮುರುಘ ರಾಜೇಂದ್ರ ವಿರಕ್ತಮಠ ಸಭಾಂಗಣದಲ್ಲಿ ಭಾನುವಾರ ಶಿವಮೊಗ್ಗ- ಚಿಕ್ಕಮಂಗಳೂರು ಮಲೆನಾಡು ಮುದ್ರಕರ ಸಂಘ ಹಾಗೂ ತಾಲ್ಲೂಕು ಮುದ್ರಕರ ಸಂಘದ ಆಶ್ರಯದಲ್ಲಿ ನಡೆದ ದೀನ ಬಂಧು ಶಾಲಾ ಮಕ್ಕಳಿಗೆ `ಉಚಿತ ನೋಟ್ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ~ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ವಿವಿಧ ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜದಲ್ಲಿರುವ ಜನರ ಜೀವನ ಏಳಿಗೆಗಾಗಿ ಸಂಘದ ಪದಾಧಿಕಾರಿಗಳು ಶ್ರಮಿಸಬೇಕು. ಆರೋಗ್ಯ ಶಿಬಿರ, ಮಕ್ಕಳ ಶಿಬಿರ, ವಿವಿಧ ಸಂಘ, ಸಂಸ್ಥೆ ಸಹಯೋಗದೊಂದಿಗೆ ಕಾನೂನಿನ ಬಗ್ಗೆ ಅರಿವು ಮೂಡುವಂತ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಸಲಹೆ ನೀಡಿದರು.
ಹಿರಿಯ ಮುದ್ರಕರಾದ ಎಸ್.ಬಿ. ಮಠದ್ ಹಾಗೂ ಎ.ಎನ್. ಸತ್ಯನಾರಾಯಣರಾವ್ ಅವರನ್ನು ಸನ್ಮಾನಿಸಲಾಯಿತು. ಎಸ್.ಬಿ. ಮಠದ್ ಮಾತನಾಡಿದರು.
ಕಾಳೇನ ಹಳ್ಳಿ ಶಿವಯೋಗಾಶ್ರಮದ ರೇವಣಸಿದ್ಧ ಸ್ವಾಮೀಜಿ, ವಿರಕ್ತಮಠ ಚನ್ನಬಸವ ಸ್ವಾಮೀಜಿ, ಹೀರೆಮಠ ರೇಣುಕಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಜಿಲ್ಲಾ ಸಂಘದ ಸಂಚಾಲಕ ಮಂಜುನಾಥ್, ಪದಾಧಿಕಾರಿಗಳಾದ ಬಿ.ಆರ್. ಪ್ರಾಣೇಶ್ ರಾವ್, ಕೆ. ಸತ್ಯೇಂದ್ರ, ಪಿ. ಶ್ರೀನಿವಾಸ್, ತಾಲ್ಲೂಕು ಮುದ್ರಕರ ಸಂಘದ ಅಧ್ಯಕ್ಷ ಎಂ. ವಿಜಯಭಾಸ್ಕರ್, ಮಾಜಿ ಅಧ್ಯಕ್ಷ ಸಿ. ಬಸವರಾಜಪ್ಪ, ಕಾರ್ಯದರ್ಶಿ ಗಂಗಾಧರ್ ಇದ್ದರು.