ಬೆಂಗಳೂರು: ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆ, ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಮಸೂದೆಗಳು ರೈತ ವಿರೋಧಿಯಾಗಿದ್ದು, ಅವುಗಳನ್ನು ಹಿಂಪಡೆಯಬೇಕು ಎಂದು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
'ಈ ಮಸೂದೆಗಳ ಮೂಲಕ ಆಹಾರ ಸರಪಳಿಯನ್ನು ಕಾರ್ಪೊರೇಟ್ ಸಂಸ್ಥೆಗಳ ವಶಕ್ಕೆ ಒಪ್ಪಿಸಲು ಸರ್ಕಾರ ಮುಂದಾಗಿದೆ. ರೈತರನ್ನು ಗುತ್ತಿಗೆ ಕೃಷಿಯತ್ತ ದೂಡುವ ಹುನ್ನಾರವಿದು' ಎಂದು ಎಸ್ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ದೂರಿದ್ದಾರೆ.
'ಈ ಮಸೂದೆಗಳನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳು ಇದೇ 25ರಂದು 'ಅಖಿಲ ಭಾರತ ಗ್ರಾಮೀಣ ಬಂದ್' ಆಚರಿಸಲಿದ್ದು, ಇದಕ್ಕೆ ಎಸ್ಯುಸಿಐ ಬೆಂಬಲ ನೀಡಲಿದೆ. ಈ ಅಪಾಯಕಾರಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಚಳವಳಿ ನಡೆಸಲಾಗುವುದು' ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.