ತುಮಕೂರು: ಜಿಲ್ಲೆಯಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 14 ದಂಪತಿಗಳು ಪುನಃ ಒಂದಾಗಿದ್ದಾರೆ.
ಜಿಲ್ಲಾ ಕೌಟುಂಬಿಕ ನ್ಯಾಯಾಲಯ, ಪಾವಗಡ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ ನ್ಯಾಯಾಧೀಶರು ದಂಪತಿಗಳಿಗೆ ಬುದ್ಧಿ ಹೇಳಿ, ಅವರ ಮನವೊಲಿಸಿದ ಪರಿಣಾಮ ದಂಪತಿಗಳು ಒಂದಾದರು. ಇದಕ್ಕೆ ವಕೀಲರು, ಕಕ್ಷಿದಾರರು, ಸಾರ್ವಜನಿಕರು ಸಾಕ್ಷಿಯಾದರು.
ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ 7 ದಂಪತಿಗಳು, ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 7 ದಂಪತಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು, ಸಿಹಿ ಹಂಚಿ ಒಗ್ಗೂಡಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ, ‘ದಂಪತಿಗಳು ಸಣ್ಣ–ಪುಟ್ಟ ವಿಚಾರಗಳಿಗೆ ಮನಸ್ಸು ಕೆಡಿಸಿಕೊಂಡು, ವಿಚ್ಛೇದನಕ್ಕೆ ಮುಂದಾಗುತ್ತಾರೆ. ನ್ಯಾಯಾಧೀಶರು, ಎರಡೂ ಕಡೆಯ ವಕೀಲರು ಬುದ್ಧಿ ಹೇಳಿದ್ದಾರೆ. ನ್ಯಾಯಾಲಯದಲ್ಲಿಯೇ ಹಾರ ಬದಲಿಸಿಕೊಂಡು, ಸಿಹಿ ತಿನಿಸಿ ಮನೆಗೆ ತೆರಳಿದ್ದಾರೆ’ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶರಾದ ನೂರುನ್ನೀಸಾ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಎನ್.ಮುನಿರಾಜ ಇದ್ದರು.