ಪಟ್ಟನಾಯಕನಹಳ್ಳಿ: ‘ನಾನು ಮಾತುಗಾರನಲ್ಲ, ಕೆಲಸಗಾರ. ಸರ್ಕಾರದಿಂದ ₹ 2,500 ಕೋಟಿ ಅನುದಾನ ತಂದು ಶಿರಾ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಹೇಳಿದರು.
ಹೆಂದೊರೆ, ನಾದೂರು ಹಾಗೂ ಹಂದಿಕುಂಟೆ ಪಂಚಾಯಿತಿಯಲ್ಲಿ ನೆಡದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಮದಲೂರು ಕೆರೆಗೆ ನೀರು ಹರಿಸಲು ಸಾಧ್ಯವೇ ಇಲ್ಲ ಎಂಬ ಮಾತು ಚಾಲ್ತಿಯಲ್ಲಿದ್ದ ಸಮಯದಲ್ಲಿ ಕೇಂದ್ರ ಸರ್ಕಾರದ ಅನುದಾನ ತಂದು ಅದನ್ನು ಸಾಧ್ಯವಾಗಿಸಿದ್ದೆ. ಮೂರು ವರ್ಷಗಳಲ್ಲಿ ಹೇಮಾವತಿ ಅಣೆಕಟ್ಟು ತುಂಬಿದರೂ, ತಾಲ್ಲೂಕಿಗೆ ನೀರು ಹರಿಸಿಲ್ಲ. ನನಗೆ ಮತ್ತೆ ಅಧಿಕಾರ ನೀಡಿದರೆ ತಾಲ್ಲೂಕಿನ ಸಮಸ್ಯೆಗೆ ದನಿಯಾಗುತ್ತೇನೆ’ ಎಂದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಅರ್.ಮಂಜುನಾಥ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಮುಖಂಡರಾದ ಎನ್.ಸಿ.ದೊಡ್ಡಯ್ಯ, ಬಿ.ಪಿ. ಪಾಂಡುರಂಗಯ್ಯ ಮಾತನಾಡಿದರು.