ತುಮಕೂರು: ಇಂಗ್ಲೆಂಡ್ನ ಸೌತ್ವೇಲ್ಸ್ ವಿ.ವಿಯ ಪ್ರಾಧ್ಯಾಪಕರ ತಂಡವು ಏ. 17ರಂದು ತುಮಕೂರು ವಿ.ವಿಗೆ ಭೇಟಿ ನೀಡಲಿದೆ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.
ವಿ.ವಿಯಲ್ಲಿ ಶುಕ್ರವಾರ ಉದ್ಯೋಗ ಮತ್ತು ಕೌಶಲಾಭಿವೃದ್ಧಿ ಕೇಂದ್ರವು ಇನ್ಶಾ ಉದ್ಯೋಗ ಸಲಹಾ ಸಂಸ್ಥೆಯೊಂದಿಗೆ ಆಯೋಜಿಸಿದ್ದ ‘ವಿದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗ– ಗಡಿಗಳಾಚೆಗೆ ವಿಸ್ತರಣೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಂಗ್ಲೆಂಡ್ ತಂಡವು ಎರಡು ವಾರಗಳ ಕಾಲ ಅಧ್ಯಯನ, ಸಂಶೋಧನೆ, ಸಂವಾದ ನಡೆಸಲಿದೆ. ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ವಿದೇಶಕ್ಕೆ ತೆರಳಿದವರ ಸಂಖ್ಯೆ 2023ರಲ್ಲಿ 7 ಲಕ್ಷಕ್ಕಿಂತ ಹೆಚ್ಚಿತ್ತು. ಈ ವರ್ಷ ಆ ಸಂಖ್ಯೆ 18 ಲಕ್ಷ ತಲುಪಬಹುದು ಎಂದು ವರದಿಗಳು ತಿಳಿಸಿವೆ ಎಂದರು.
ಭಾರತದಲ್ಲಿ ಗುಣಮಟ್ಟದ ವಿ.ವಿಗಳ ಸಂಖ್ಯೆ ಹೆಚ್ಚಿಸಿದರೆ ಅಧ್ಯಯನ, ಸಂಶೋಧನೆಗಾಗಿ ಬರುವ ವಿದೇಶಿಗರ ಸಂಖ್ಯೆ ಹೆಚ್ಚಾಗುತ್ತದೆ. ದೇಶದ ಆರ್ಥಿಕತೆಗೆ ಸಹಕಾರಿಯಾಗುವುದರ ಜತೆಗೆ ಭಾರತವನ್ನು ಶಿಕ್ಷಣ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಬಹುದು ಎಂದು ತಿಳಿಸಿದರು.
ವಿ.ವಿ ಕಲಾ ವಿಭಾಗದ ಡೀನ್ ಪ್ರೊ.ಎಚ್.ಕೆ.ಶಿವಲಿಂಗಸ್ವಾಮಿ, ‘ಉದ್ಯೋಗ, ಸಂಸ್ಕೃತಿ, ಸಂಬಳ, ಭಾಷೆ, ಉತ್ತಮ ಬದುಕನ್ನು ನಿರ್ಣಯಿಸುವ ಭಾಗವಾಗಿವೆ’ ಎಂದು ಅಭಿಪ್ರಾಯಪಟ್ಟರು.
ವಿ.ವಿ ಉದ್ಯೋಗ ಮತ್ತು ಕೌಶಲಾಭಿವೃದ್ಧಿ ಕೇಂದ್ರದ ಸಂಯೋಜಕ ಪ್ರೊ.ಕೆ.ಜಿ.ಪರಶುರಾಮ, ಇನ್ಶಾ ಸಲಹಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹ್ಮದ್ ರಾಸಿಕ್, ಸದಸ್ಯ ಜೇಬಕುಮಾರ್ ಹಾಜರಿದ್ದರು.