ತುಮಕೂರು: ಮಾಸಿಕ ₹ 18,000 ಕನಿಷ್ಠ ವೇತನವನ್ನು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ತುಮಕೂರು ಜಿಲ್ಲಾ ಸಮಿತಿಯ ಸದಸ್ಯರು ಎಐಟಿಯುಸಿ ಸಂಘಟನೆಯ ಸಹಯೋಗದಲ್ಲಿ ಶನಿವಾರ ಪ್ರತಿಭಟನೆ ಮಾಡಿದರು.
ಶಾಲೆಗಳಿಗೆ ಬಿಸಿಯೂಟ ಪೂರೈಕೆ ಮಾಡಲು ಇಸ್ಕಾನ್ ಮತ್ತು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುವುದನ್ನು ಕೈಬಿಡಬೇಕು. ಸಿಬ್ಬಂದಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ಕೆಲಸಗಾರರನ್ನು ಶಾಲಾ ಸಿಬ್ಬಂದಿಯಂದು ಪರಿಗಣಿಸಬೇಕು. ಭವಿಷ್ಯನಿಧಿ ಸೌಲಭ್ಯ ಮತ್ತು ಆರೋಗ್ಯ ವಿಮಾ ಸೌಲಭ್ಯ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಿಸಿಯೂಟ ತಯಾರಕರಿಗೆ ₹ 2 ಲಕ್ಷ ಅಫಘಾತ ವಿಮೆ, ಮರಣ ಹೊಂದಿದರೆ ಕುಟುಂಬದ ಸದಸ್ಯರಿಗೆ ₹ 5 ಲಕ್ಷ ಪರಿಹಾರ ನೀಡಬೇಕು. ನಿವೃತ್ತರಾದವರಿಗೆ ₹ 3,000 ಪಿಂಚಣಿಯೊಂದಿಗೆ ₹ 2 ಲಕ್ಷ ಹಿಡುಗಂಟು ನೀಡಬೇಕು ಎಂದು ಬೇಡಿಕೆಗಳನ್ನು ಮಂಡಿಸಿದರು.
ಉದ್ಯೋಗ ಭದ್ರತೆಯಿಲ್ಲದೆ 16 ವರ್ಷಗಳಿಂದ ನೌಕರರು ದುಡಿಯುತ್ತಿದ್ದಾರೆ. ಮುಖ್ಯ ಅಡುಗೆ ತಯಾರಿಸುವವರಿಗೆ ₹2,700, ಸಹಾಯಕಿಯರಿಗೆ ₹2,600 ಮಾತ್ರ ಸಿಗುತ್ತಿದೆ. ಸರ್ಕಾರ ಈ ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಸಂಚಾಲಕರಾದ ರಾಧಮ್ಮ, ಸಾವಿತ್ರಮ್ಮ, ಉಮಾದೇವಿ, ನಾಗರತ್ನಮ್ಮ, ಎನ್.ಎಸ್.ನಳಿನಾ, ಅನಿತಾ, ಪದ್ಮಾ, ಚಂದ್ರಕಲಾ ಇದ್ದರು. ರಾಜ್ಯ ಸರ್ಕಾರದ ಗಮನ ಸೆಳೆಯಲು ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.