ಮಧುಗಿರಿ: ದೇವತಾ ಕಾರ್ಯಗಳು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತವೆ ಎಂದು ಶಿರಾ ಶಾಸಕ ಸಿ.ಎಂ. ರಾಜೇಶ್ ಗೌಡ ತಿಳಿಸಿದರು.
ತಾಲ್ಲೂಕಿನ ನೀರಕಲ್ಲು ಗ್ರಾಮದಲ್ಲಿ ಸೋಮವಾರ ನಡೆದ ಅಮ್ಮಾಜಿ ಕಾವಲ್ಲೇಶ್ವರಿ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಕ್ಷಾತೀತವಾಗಿ ರಾಜಕೀಯವಿಲ್ಲದೆ ದೇವರ ಉತ್ಸವ ನಡೆಸಬೇಕು. ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿ ಶಿಥಿಲಗೊಂಡ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಉಳ್ಳವರು ಉದಾರವಾಗಿ ದಾನ - ಧರ್ಮ ಮಾಡುವ ಮೂಲಕ ಸಂಸ್ಕೃತಿಯ ಭಾಗವಾದ ಶ್ರದ್ಧಾ ಕೇಂದ್ರಗಳ ಪುನರುತ್ಥಾನಕ್ಕೆ ಶ್ರಮಿಸುತ್ತಿದ್ದಾರೆ ಎಂದರು.
‘ನೀರಕಲ್ಲು ಕಾವಲ್ಲೇಶ್ವರಿ ನಮ್ಮ ಮನೆದೇವರಾಗಿದ್ದು ಶ್ರೀಕ್ಷೇತ್ರದ ಅಭಿವೃದ್ಧಿಗೆ ನಮ್ಮ ಕುಟುಂಬ ನೆರವು ನೀಡಿದೆ. ಮುಂದೆಯೂ ಸಮುದಾಯ ಭವನ ನಿರ್ಮಾಣ ಸೇರಿದಂತೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು’ ಎಂದರು.
ಜಿ.ಪಂ. ಮಾಜಿ ಸದಸ್ಯ ಪ್ರಕಾಶ್ ಗೌಡ, ಶಿರಾ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮೂಡಲಗಿರಿಯಪ್ಪ, ಗ್ರಾ.ಪಂ. ಸದಸ್ಯ ಎನ್. ಹನುಮಂತರಾಯಪ್ಪ, ಪೂಜಾರ್ ತಿಪ್ಪೇಸ್ವಾಮಿ, ದೇಗುಲದ ಹನುಮಂತರಾಜು, ತಿಮ್ಮರಾಜು, ಗೌಡ ರಾಮಚಂದ್ರಯ್ಯ, ಗೊಂಚಿಗಾರ್ ಹನುಮಂತಪ್ಪ, ಮಾಲಿಂಗಪ್ಪ ಇದ್ದರು.