ತುಮಕೂರು: ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರನ್ನು ಗೊಲ್ಲ ಅಭಿವೃದ್ಧಿ ನಿಗಮ ಎಂದು ಬದಲಿಸಲು ಸರ್ಕಾರದ ಮೇಲೆ ಕೆಲವರು ಒತ್ತಡ ಹೇರುತ್ತಿದ್ದು ಇದನ್ನು ವಿರೋಧಿಸಬೇಕು ಎಂದು ಜಿಲ್ಲೆಯ ಕಾಡುಗೊಲ್ಲ ಸಮುದಾಯದ ಮುಖಂಡರು ಒಕ್ಕೊರಲಿನ ನಿರ್ಣಯಕೈಗೊಂಡಿದ್ದಾರೆ.
ಭಾನುವಾರ ನಗರದ ಬಟವಾಡಿಯ ಮನೆಯೊಂದರಲ್ಲಿ ಜಿಲ್ಲಾ ಕಾಡುಗೊಲ್ಲರ ಸಂಘದ ಅಧ್ಯಕ್ಷ ಚಂಗಾವರ ಕರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಕಾಡುಗೊಲ್ಲ ಸಮುದಾಯದ ಮುಖಂಡರ ಸಭೆ ನಡೆಯಿತು.
ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ, ಬಸವರಾಜು, ವಕೀಲರಾದ ದೇವರಾಜ್, ಕೆಂಪದೊಡ್ಡೇರಿ ಈರಣ್ಣ, ಚಂಗಾವರ ಮಾರಣ್ಣ, ಈಶ್ವರಪ್ಪ, ಚಂದ್ರಶೇಖರ್, ಗಂಗಾಧರ್, ಬಸವರಾಜು ಸೇರಿದಂತೆ ಸಮುದಾಯದ ಅಧಿಕಾರಿಗಳು, ಮುಖಂಡರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ನಿಗಮ ರಚನೆಯಾಗಿ ಇಷ್ಟು ದಿನವಾದರೂ ರಾಜ್ಯ ಸರ್ಕಾರ ಅನುದಾನ ನೀಡಿಲ್ಲ. ಅಧ್ಯಕ್ಷರನ್ನೂ ನೇಮಿಸಿಲ್ಲ. ನಿಗಮದ ಹೆಸರು ಬದಲಾವಣೆಯ ಪ್ರಸ್ತಾಪಗಳು ಸಹ ಕೇಳಿ ಬರುತ್ತಿವೆ. ಯಾವುದೇ ಕಾರಣಕ್ಕೂ ಹೆಸರು ಬದಲಾವಣೆ ಮಾಡಬಾರದು.ಒಂದು ವೇಳೆ ಹೆಸರು ಬದಲಿಸಿದರೆ ಹೋರಾಟ ನಡೆಸಬೇಕು ಎಂದು ಮುಖಂಡರು ಸಭೆಯಲ್ಲಿ ತಿಳಿಸಿದರು.
‘ಚುನಾವಣೆ ಪೂರ್ವದಲ್ಲಿಯೇ ಯಡಿಯೂರಪ್ಪ ಅವರು ನಾನು ಮುಖ್ಯಮಂತ್ರಿಯಾದರೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಮಾಡಿದ್ದಾರೆ. ನಾವು ಈಗಾಗಲೇ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇವೆ. ಮುಂದೆ ನಾವು ಯಾರಿಗೂ ಮತ ಹಾಕುವುದಿಲ್ಲ. ಕೊಡಿ ನಮಗೆ ಸ್ಥಾನ. ನಾವೇ ಗೆಲ್ಲುತ್ತೇವೆ ಎಂದು ಕೇಳಬೇಕಾಗಿದೆ’ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ನಿಗಮದ ಹೆಸರು ಬದಲಾವಣೆಗೆ ಕೆಲವರು ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾತು ಜಿಲ್ಲೆಯ ಕಾಡುಗೊಲ್ಲ ಸಮುದಾಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಯಾರು ಹೆಸರು ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಮುಖಂಡರನ್ನು ಪ್ರಶ್ನಿಸಿದರೆ, ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಅವರ ಪತಿ ಯಾದವ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಅವರತ್ತ ಬೆರಳು ತೋರುತ್ತಿದ್ದಾರೆ.