ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಲಕ್ಷ್ಮೀಪುರ ಅರಣ್ಯ ಪ್ರದೇಶದಲ್ಲಿ ಬೂದನಹಳ್ಳಿಯ ಪ್ರದೀಪ್ (35) ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪ್ರಕರಣ ದಾಖಲಾದ 24 ಗಂಟೆಯೊಳಗೆ ಹುಲಿಯೂರುದುರ್ಗ ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ಸ್ನೇಹಿತರಾದ ನಾಗೇಶ್, ಶಂಕರ್ ಬಂಧಿತರು. ಸ್ನೇಹಿತರ ನಡುವೆ ಕ್ಷುಲಕ ಕಾರಣಕ್ಕೆ ಭಿನ್ನಾಭಿಪ್ರಾಯ ಉಂಟಾಗುತ್ತಿದ್ದು, ಬೇಸತ್ತ ಆರೋಪಿಗಳು ಪಾರ್ಟಿ ಮಾಡುವ ನೆಪದಲ್ಲಿ ಬೈಕ್ನಲ್ಲಿ ಕರೆದೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಶವದ ಮಹಜರು ಸಮಯದಲ್ಲಿ ಅರೋಪಿಯೊಬ್ಬ ಸಂಶಯಾಸ್ಪದವಾಗಿ ವರ್ತಿಸುತಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಮಯದಲ್ಲಿ ಕೃತ್ಯ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನಗಳನ್ನು ಒಂದು ಕಿ.ಮೀ ದೂರದಲ್ಲಿ ಎಸೆದಿದ್ದ ಕಲ್ಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಓಂಪ್ರಕಾಶ್, ಸಿಪಿಐ ಮಾದ್ಯನಾಯ್ಕ್, ಪಿಎಸ್ಐ ಪ್ರಶಾಂತ್ ಸಿಬ್ಬಂದಿಗಳು ಆರೋಪಿಗಳ ಬಂಧನಕ್ಕೆ ಶ್ರಮಿಸಿದ್ದಾರೆ.