ತುಮಕೂರು: ಬಜರಂಗದಳದ ಇಬ್ಬರು ಕಾರ್ಯಕರ್ತರ ಮೇಲೆ ಅನ್ಯ ಕೋಮಿನ ಯುವಕರು ನಗರದ ಗುಬ್ಬಿಗೇಟ್ ರಸ್ತೆಯಲ್ಲಿ ಮಂಗಳವಾರ ಸಂಜೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಬಜರಂಗದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ಹಾಗೂ ಕಾರ್ಯಕರ್ತ ಕಿರಣ್ ಮೇಲೆ ರಾಡ್ನಿಂದ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಮಂಜು ಅವರಿಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೀಮಸಂದ್ರದ ಕಡೆಯಿಂದ ಮಂಜು ಭಾರ್ಗವ ಅವರು ಕಾರಿನಲ್ಲಿ ಬರುತ್ತಿದ್ದು, ಅವರನ್ನು ಕಿರಣ್ ಬೈಕ್ನಲ್ಲಿ ಹಿಂಬಾಲಿಸಿದ್ದಾರೆ. ಬಿ.ಎಚ್.ರಸ್ತೆಯಲ್ಲಿ ಮೂರು ಬೈಕ್ಗಳಲ್ಲಿ ಯುವಕರು ವ್ಹೀಲಿಂಗ್ ಮಾಡುತ್ತಿದ್ದು, ಇದನ್ನು ಪ್ರಶ್ನಿಸಿದ್ದಾರೆ. ವ್ಹೀಲಿಂಗ್ ಮಾಡಲು ರಸ್ತೆ ಬಿಡಲಿಲ್ಲ ಎಂದು ಗಲಾಟೆ ಮಾಡಿದ್ದಾರೆ. ಗುಬ್ಬಿ ಗೇಟ್ನ ಚಿಕ್ಕಪೇಟೆ ತಿರುವಿನ ಸಮೀಪಕ್ಕೆ ಬರುವಷ್ಟರಲ್ಲಿ ಯುವಕರು ಬೈಕ್ನಲ್ಲಿ ಬಂದು ಕಾರು ಅಡ್ಡಗಟ್ಟಿದ್ದಾರೆ.
ಮುಂದೆ ಹೋಗಲು ದಾರಿ ಬಿಡದಿದ್ದಾಗ ಮಂಜು ಕಾರಿನಿಂದ ಇಳಿದಿದ್ದು, ವಾಗ್ವಾದ ಆರಂಭವಾಗಿದ್ದು ಯುವಕರು ರಾಡ್ನಿಂದ ಹಲ್ಲೆ ಮಾಡಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ಕಿರಣ್ ಮೇಲೂ ಹಲ್ಲೆ ನಡೆದಿದೆ. ನೆಲಕ್ಕೆ ಬೀಳಿಸಿ ಹಲ್ಲೆ ಮಾಡುವುದನ್ನು ಕಂಡ ಕೆಲವರು ಸ್ಥಳಕ್ಕೆ ಬಂದು ಬಿಡಿಸಿದ್ದಾರೆ. ಅಷ್ಟರಲ್ಲಿ ಚೆನ್ನಾಗಿ ಹೊಡೆದಿದ್ದಾರೆ. ನಂತರ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಸಮಯದಲ್ಲಿ ನೂರಾರು ಜನರು ಗುಂಪು ಸೇರಿದ್ದರಿಂದ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಆಸ್ಪತ್ರೆಗೆ ಭೇಟಿನೀಡಿ ಗಾಯಾಳುಗಳನ್ನು ಭೇಟಿಮಾಡಿದ ನಂತರ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯದರ್ಶಿ ಜಿ.ಎಸ್.ಬಸವರಾಜ್, ಘಟನೆಯನ್ನು ತೀವ್ರವಾಗಿ ಖಂಡಿಸಿದರು. ವ್ಹೀಲಿಂಗ್ ಮಾಡಲು ಅವಕಾಶ ನೀಡಲಿಲ್ಲ ಎಂದು ಹಲ್ಲೆ ನಡೆಸಿದ್ದಾರೆ. ಹಿಂಬಾಲಿಸಿಕೊಂಡು ಬಂದು ದುರುದ್ದೇಶದಿಂದಲೇ ಈ ಕೃತ್ಯ ಮಾಡಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು 24 ಗಂಟೆ ಒಳಗೆ ಪೊಲೀಸರು ಬಂಧಿಸಬೇಕು. ಬಂಧಿಸಲು ವಿಫಲರಾದರೆ ಹಿಂದೂ ಸಮಾಜ ಸಶಕ್ತವಾಗಿದೆ ಎಂಬುದನ್ನು ತೋರಿಸುತ್ತೇವೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.