ಮಧುಗಿರಿ: ತಾಲ್ಲೂಕಿನ ಪುರವರ ಗ್ರಾಮದ ಹುಲಿ ಹಳ್ಳದಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಹುಲಿ ಹಳ್ಳಕ್ಕೆ ತೆರಳುವ ರಸ್ತೆಗಳಿಗೆ ವಾಹನಗಳು ಪ್ರವೇಶಿಸದಂತೆ ತಾಲ್ಲೂಕು ಆಡಳಿತದಿಂದ ರಸ್ತೆ ಸುತ್ತಲೂ ಜೆಸಿಬಿ ಯಂತ್ರದ ಮೂಲಕ ಸೋಮವಾರ ಕಾಲುವೆ ತೆಗೆದು ವಾಹನಗಳಿಗೆ ನಿರ್ಬಂಧ ವಿಧಿಸಲಾಯಿತು.
ಇತ್ತೀಚೆಗೆ ಸುರಿದ ಬಾರಿ ಮಳೆಯಿಂದ ಬಿಜವರ ಕೆರೆಯ ಕೋಡಿಯಿಂದ ನೀರು ಹುಲಿ ಹಳ್ಳಕ್ಕೆ ಹರಿದಿತ್ತು. ನೀರಿನ ಜೊತೆಯಲ್ಲಿ ಮರಳು ಕೂಡ ಹರಿದು ಬಂದಿತ್ತು. ಕೆಲವರು ಮರಳನ್ನು ತುಂಬಿಕೊಂಡು ಸ್ಥಳೀಯ ಕಟ್ಟಡ ಹಾಗೂ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು.
ಆದರೆ, ಇದನ್ನೇ ಕೆಲವರು ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ಮಾರಾಟ ಮಾಡುವ ದಂಧೆ ಮಾಡುತ್ತಿದ್ದಾರೆ ಎಂಬ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಹಳ್ಳಕ್ಕೆ ಕಾಲುವೆಗಳನ್ನು ತೆಗೆದು ವಾಹನಗಳು ಹಳ್ಳಕ್ಕೆ ತೆರಳದಂತೆ ನಿರ್ಬಂಧ ಹೇರಲಾಯಿತು.
ಪುರವರ ಕಂದಾಯ ನಿರೀಕ್ಷಕ ಜಿ. ಜಯರಾಮಯ್ಯ , ಕಾರ್ಯದರ್ಶಿ ನಟರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.