ತುಮಕೂರು: ನಗರದಲ್ಲಿ ಮಂಗಳವಾರ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋನಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರವನ್ನು ಪ್ರದರ್ಶಿಸಲಾಯಿತು. ಅಮಿತ್ ಶಾ ಅವರ ಈ ನಡೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಟೌನ್ಹಾಲ್ ವೃತ್ತದಿಂದ ಹೊರಟ ರೋಡ್ ಶೋ ಎಂ.ಜಿ.ರಸ್ತೆ ಪ್ರವೇಶಿಸಿತು. ಈ ವೇಳೆ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರವನ್ನು ಅಮಿತ್ ಶಾ ಅವರು ಕಾರ್ಯಕರ್ತರಿಗೆ ತೋರಿಸಿದರು.
ಸ್ವಾಮೀಜಿ ಅವರು ಜಾತ್ಯತೀತ ಮತ್ತು ರಾಜಕೀಯೇತರ ವ್ಯಕ್ತಿ ಆಗಿದ್ದರು. ಅವರ ಭಾವಚಿತ್ರವನ್ನು ಚುನಾವಣಾ ಪ್ರಚಾರ ಸಭೆಯಲ್ಲಿ ತೋರಿಸುವ ಮೂಲಕ ಅಮಿತ್ ಶಾ ಏನನ್ನು ಹೇಳಲು ಹೊರಟಿದ್ದಾರೆ. ಇದು ಅಕ್ಷಮ್ಯ. ಇಡೀ ಜಿಲ್ಲೆಯ ಜಾತ್ಯತೀತ ಪರಂಪರೆಗೆ ಮಾಡಿದ ಅವಮಾನ ಎಂದು ಆಕ್ಷೇಪಿಸಿದ್ದಾರೆ.