ತುಮಕೂರು: ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ನಗರದ ಮದ್ಯದ ವ್ಯಾಪಾರಿ ರಮೇಶ್ ಗೌಡ ಅವರ ಮನೆಯಲ್ಲಿ ಮಂಗಳವಾರ ನೀರವ ಮೌನ ಆವರಿಸಿತ್ತು.
ಸಂಬಂಧಿಕರು, ಹಿತೈಷಿಗಳು, ಸ್ನೇಹಿತರು ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದರು. ಶಾಸಕ ಬಿ.ಜಿ.ಜ್ಯೋತಿ ಗಣೇಶ್ ಮಂಗಳವಾರವೂ ಮನೆಗೆ ಬಂದು ಕುಟುಂಬದಿಂದ ಮಾಹಿತಿ ಪಡೆದರು. ಸಾಂತ್ವನ ಹೇಳಿದ ಧೈರ್ಯ ತುಂಬಿದರು.
ರಮೇಶ್ ಗೌಡ ಅವರ ಪಾರ್ಥಿವ ಶರೀರ ಬರುವಿಕೆಯತ್ತ ಅವರ ಕುಟುಂಬ ಕಾಯುತ್ತಿದೆ. ತುಮಕೂರಿನ ಅವರ ಮನೆಯಲ್ಲಿ ಒಂದು ತಾಸು ಹಾಗೂ ಕುಣಿಗಲ್ನ ಅವರ ಮನೆಯಲ್ಲಿ ಒಂದು ತಾಸು ದರ್ಶನಕ್ಕಿಟ್ಟು ನಂತರ ನಾಗಮಂಗಲ ತಾಲ್ಲೂಕಿನ ಬೆಟ್ಟಕೋಟೆಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಮೂಲಗಳು ತಿಳಿಸಿವೆ.
ರಮೇಶ್ ಗೌಡ ಅವರ ಪತ್ನಿ ಹಾಗೂ ಪುತ್ರಿಯ ರೋದನ ತೀವ್ರವಾಗಿತ್ತು. ಅವರನ್ನು ಸಂಬಂಧಿಕರು ಸಮಾಧಾನಪಡಿಸಿದರು. ಮನೆಯ ಬಳಿ ಬರುತ್ತಿದ್ದ ರಮೇಶ್ ಗೌಡ ಸ್ನೇಹಿತರು ಸಹ ಕಣ್ಣೀರಿಟ್ಟರು.