ತುಮಕೂರು: 12ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ಪರಿಷ್ಕರಿಸಿ ಷಟ್ಸ್ಥಲ ಸಂಪ್ರದಾಯಕ್ಕೆ ನೆಲೆ ಕಲ್ಪಿಸಿ ಲಿಂಗಾಯತ ಧರ್ಮಕ್ಕೆ ಧಾರ್ಮಿಕ ಸಂವಿಧಾನವನ್ನು ರಚಿಸಿದ ಕೀರ್ತಿ ಶರಣ ಚನ್ನಬಸವಣ್ಣ ಅವರಿಗೆ ಸಲ್ಲುತ್ತದೆ ಎಂದು ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ನುಡಿದರು.
ನಗರದ ಬಸವಕೇಂದ್ರ ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್ ಬಸವ ಮಂಟಪದಲ್ಲಿ ಏರ್ಪಡಿಸಿದ್ದ ‘ಚನ್ನಬಸವಣ್ಣನ ಜಯಂತಿ’ಯಲ್ಲಿ ಉಪನ್ಯಾಸ ನೀಡಿದರು.
‘ಅವಿರಳ ಜ್ಞಾನಿ, ದಿವ್ಯಗುಣಸಂಪನ್ನ, ಷಟ್ಸ್ಥಲ ಸ್ಥಾಪನಾಚಾರ್ಯನೆಂದು ಖ್ಯಾತನಾದ ಚನ್ನಬಸವಣ್ಣ ಅನುಭವ ಮಂಟಪದ ಕಾರ್ಯಕಲಾಪಗಳ ಕಾರ್ಯದರ್ಶಿಯಾಗಿದ್ದರು. ತನಗಿಂತ ಹಿರಿಯನಾದ ಶಿವಯೋಗಿ ಸಿದ್ಧರಾಮೇಶ್ವರರಿಗೆ ಲಿಂಗದೀಕ್ಷೆ ಮಾಡಿದ ಮಹಾಮಹಿಮ’ ಎಂದರು.
ಚನ್ನಬಸವಣ್ಣ ಶಿವಪಥದ ಆಚಾರ್ಯರಾಗಿದ್ದಂತೆಯೇ ಉತ್ತಮ ರಾಜನೀತಿಜ್ಞರಾಗಿದ್ದರು. ಅಲ್ಲಮಪ್ರಭುವಿನ ನಂತರ ಶೂನ್ಯ ಪೀಠದ ಅಧ್ಯಕ್ಷರಾದರು. ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ಮೊದಲಾದ ಮತ ಪ್ರಕ್ರಿಯೆಗಳನ್ನು ರೂಪಿಸಿದರು. ಅವರ ವಚನಗಳು ಅವರಲ್ಲಿ ಹುದುಗಿದ್ದ ಅಧ್ಯಾತ್ಮ ಶಕ್ತಿಯನ್ನು ತೋರಿಸುತ್ತವೆ ಎಂದರು.