ತುಮಕೂರು: ಮಹಾತ್ಮ ಗಾಂಧೀಜಿ 150ನೇ ಜಯಂತಿ ಗೌರವ ಸೂಚಕವಾಗಿ ಜಿಲ್ಲೆಯ ಪ್ರತಿ ಗ್ರಾಮವನ್ನು ಸ್ವಚ್ಛ, ಸುಂದರ, ಆರೋಗ್ಯಯುತ ಹಾಗೂ ತ್ಯಾಜ್ಯ ಮುಕ್ತವಾಗಿಸುವ ಉದ್ದೇಶ ದಿಂದ ಜಿಲ್ಲಾ ಪಂಚಾಯಿತಿಯು ಅಕ್ಟೋಬರ್ನಲ್ಲಿ ‘ಸ್ವಚ್ಛೋತ್ಸವ– ನಿತ್ಯೋತ್ಸವ’ ಮಾಸಾಚರಣೆ ಹಮ್ಮಿಕೊಂಡಿದೆ.
ಮಾಸಾಚರಣೆಯನ್ನು ಅ. 2ರಿಂದ 31ರ ವರೆಗೆ ಹಮ್ಮಿಕೊಳ್ಳಲಾಗಿದೆ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ‘ಸ್ವಚ್ಛ ಸಂಕೀರ್ಣ’ ನಿರ್ಮಿಸಲು ಉದ್ದೇಶಿಸಲಾಗಿದೆ.
ಪಂಚಾಯಿತಿಗಳಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ನಿರ್ಮಿಸಲಾಗುವ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ‘ಸ್ವಚ್ಛ ಸಂಕೀರ್ಣ’ ವಿನ್ಯಾಸಗೊಳಿಸಲಾಗುವುದು. ಸ್ವಚ್ಛ ಸಂಕೀರ್ಣವು ಏಕರೂಪದ ಬಣ್ಣ, ಚಿಹ್ನೆ, ಸಂದೇಶ ಮತ್ತು ವಿನ್ಯಾಸ ಹೊಂದಿರುತ್ತದೆ.
ತಿಪಟೂರು ತಾಲ್ಲೂಕಿನ ಬಿಳಿಗೆರೆ, ಮಧುಗಿರಿ ತಾಲ್ಲೂಕಿನ ಹೊಸಕೆರೆ ಹಾಗೂ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಪಂಚಾಯಿತಿಯಲ್ಲಿ ಈಗಾಗಲೇ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲಾಗಿದೆ. ಬಿಳಿಗೆರೆ ಘಟಕಕ್ಕೆ ಅ. 2ರಂದು ಹಾಗೂ ಹೊಸಕೆರೆ ಮತ್ತು ಹೊಳವನಹಳ್ಳಿ ತ್ಯಾಜ್ಯ ಘಟಕಗಳಿಗೆ ಅ.15ರಂದು ಚಾಲನೆ ನೀಡಲಾಗುವುದು.
ಬಿಳಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಅ. 2ರಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಘನ ತ್ಯಾಜ್ಯ ನಿರ್ವಹಣಾ ಘಟಕಗಳ ಏಕರೂಪದ ಬ್ರಾಂಡಿಂಗ್ ಹಾಗೂ ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆಗೆ ಚಾಲನೆ ನೀಡುವರು.