ಕೊಡಿಗೇನಹಳ್ಳಿ: ಹೋಬಳಿಯ ನಾಗೇನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಗುರುವಾರ ನೋಡಲ್ ಅಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ತಂಡ ಭೇಟಿ ನೀಡಿ ರೈತರಿಂದ ಅಗತ್ಯ ದಾಖಲೆ ಸಂಗ್ರಹಿಸಿದರು.
ನೋಡಲ್ ಅಧಿಕಾರಿ ಲಕ್ಷ್ಮಿನರಸಯ್ಯ ಮಾತನಾಡಿ, 2023-24ನೇ ಸಾಲಿನ ಮಂಗಾರು ಹಂಗಾಮಿನಲ್ಲಿ ಬರಪೀಡಿತ ಪ್ರದೇಶವೆಂದು ಮಧುಗಿರಿ ತಾಲ್ಲೂಕನ್ನು ಸರ್ಕಾರ ಘೋಷಿಸಿರುವುದರಿಂದ ಕೊಡಿಗೇನಹಳ್ಳಿ ಹೋಬಳಿಯ ಎಲ್ಲ ರೈತರು ಪರಿಹಾರಕ್ಕಾಗಿ ರೈತರ ಗುರುತಿನ ದಾಖಲೆ(ಎಫ್.ಐ.ಡಿ.) ಮಾಡಿಸುವುದು ಕಡ್ಡಾಯ. ರೈತ ಸಂಪರ್ಕ ಕೇಂದ್ರ, ಗ್ರಾಮ ಆಡಳಿತಾಧಿಕಾರಿ ಅಥವಾ ಗ್ರಾಮ ಸಹಾಯಕರನ್ನು ಸಂಪರ್ಕಿಸಿ ಆದಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಎಲ್ಲ ಪಹಣಿ ನೀಡಬೇಕು. ಇಲ್ಲದಿದ್ದರೆ ಬರಪರಿಹಾರ ಹಣದಿಂದ ವಂಚಿತರಾಗಬೇಕಾಗುತ್ತದೆ ಎಂದರು.
ಕಂದಾಯ ತನಿಖಾಧಿಕಾರಿ ಸಿ.ಆರ್. ರವೀಂದ್ರ, ಗ್ರಾಮ ಆಡಳಿತಾಧಿಕಾರಿ ಎಂ.ಎನ್. ಮಹೇಶ್, ಗ್ರಾಮ ಸಹಾಯಕ ನಾರಾಯಣಪ್ಪ, ರೈತರಾದ ಹನುಮಂತರೆಡ್ಡಿ, ಟಿ.ಆರ್.ರೆಡ್ಡಿ, ಚಿನ್ನಪ್ಪಯ್ಯ, ರಾಮಕ್ಕ, ಮಂಜುಳ, ಅಶ್ವತ್ಥಪ್ಪ ಇದ್ದರು.