ಕೋರ: ಹೋಬಳಿಯ ಹಿರೇತೊಟ್ಲುಕೆರೆ ಗ್ರಾಮಸ್ಥರು ಕೊರೊನಾ ಸೋಂಕು ನಿವಾರಣೆಗೆ ಅಜ್ಜಿ ಹಬ್ಬ ಮಾಡಿ ಬೇವಿನ ಮರಕ್ಕೆ ಒಬ್ಬಟ್ಟಿನ ಎಡೆ ಹಾಕಿ ಪ್ರಾರ್ಥಿಸಿದರು.
ಅಜ್ಜಿ ಹಬ್ಬ ಮಾಡಲು ಗ್ರಾಮದಲ್ಲಿ ಡಂಗೂರ ಸಾರಲಾಗಿತ್ತು. ಅದರಂತೆ ಗ್ರಾಮಸ್ಥರು ಮಂಗಳವಾರ ಒಬ್ಬಟ್ಟಿನ ಅಡುಗೆ ಮಾಡಿ ಗ್ರಾಮದ ಹೊರವಲಯದಲ್ಲಿರುವ ಬೇವಿನ ಮರಕ್ಕೆ ಪೂರ್ವಾಭಿಮುಖವಾಗಿ ಹಸಿರು ಚಪ್ಪರ ಹಾಕಿ, ಬೇವಿನ ಮರಕ್ಕೆ ಸೀರೆ ಉಡಿಸಿ, ಅರಿಸಿನ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರು.
ಸಣ್ಣ ಮಣ್ಣಿನ ಕುಡಿಕೆಗೆ ಅರಿಸಿನದ ದಾರ ಕಟ್ಟಿ ಕುಡಿಕೆಗೆ ನಾಣ್ಯ ಹಾಕಿ ಪಾನಕ ಸಮರ್ಪಿಸಿದರು. ಬೇವಿನ ಮರಕ್ಕೆ ಮಡಿಲಕ್ಕಿ ಸಮರ್ಪಿಸಿ ಪ್ರಾರ್ಥಿಸಿದರು.
‘ನಾವು ಸಣ್ಣ ಮಕ್ಕಳಿದ್ದಾಗ ಇದೇ ರೀತಿ ಕಾಯಿಲೆ ಬಂದಿತ್ತು. ಜನ ವಾಂತಿ ಬೇಧಿಯಿಂದ ನರಳಿ ಪ್ರಾಣ ಬಿಟ್ಟಿದ್ದರು. ಆಗ ಗ್ರಾಮದಲ್ಲಿ ಅಜ್ಜಿ ಹಬ್ಬ ಮಾಡಿದಾಗ ಕಾಯಿಲೆ ನಿವಾರಣೆಯಾಗಿತ್ತು. ಈಗ ಬಂದಿರುವ ಕಾಯಿಲೆಯೂ ಅದೇ ಸ್ವರೂಪದ್ದಾಗಿದೆ. ಆದ್ದರಿಂದ ಹಬ್ಬ ಮಾಡಿದೆವು’ ಎಂದು ಗ್ರಾಮದ ಹಿರಿಯ ಮಹಿಳೆ ಸಿದ್ದಲಿಂಗಮ್ಮ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.