ತುಮಕೂರು: ಇಡೀ ನಗರವೇ ಬಂದ್ ಆಗಿದೆ. ಕೂಲಿಕಾರರು, ನಿರ್ಗತಿಕರು ಅನ್ನದ ದಾರಿ ಹುಡುಕುತ್ತಿದ್ದಾರೆ. ಇಂತಹದ್ದರ ನಡುವೆಯೇ ನಗರದಲ್ಲಿ ಮಾನವೀಯ ಮುಖಗಳು ಸಹ ಕಾಣುತ್ತಿವೆ. ಅಶಕ್ತರಿಗೆ ಕೆಲವರು ಸ್ವಪ್ರೇರಣೆಯಿಂದ ಊಟ, ನೀರು ನೀಡಿ ನೆರವಾಗುತ್ತಿದ್ದಾರೆ.
ಮರಳೂರಿನ ಅರುಣ್ ಕುಮಾರ್ ಮತ್ತು ಮಂಜುನಾಥ್ ಅವರು ಊಟದ ಸೌಲಭ್ಯ ಒದಗಿಸುತ್ತಿದ್ದಾರೆ. ಅವರಿಗೆ ದಾನಿಗಳು ಸಹ ನೆರವಾಗಬಹುದು. ಅರುಣ್ ಕುಮಾರ್ ಅವರನ್ನು 9611503037 ಮೂಲಕ ಸಂಪರ್ಕಿಸಬಹುದು.
ಶಶಿಧರ್ ಎಂಬುವವರು ಪೊಲೀಸರು ಹಾಗೂ ನಾಗರಿಕರಿಗೆ ಕುಡಿಯುವ ನೀರು ಒದಗಿಸುತ್ತಿದ್ದಾರೆ. ಕೆಲಸದಲ್ಲಿ ತೊಡಗಿರುವ ಪೊಲೀಸರ ಬಳಿಗೆ ತೆರಳಿ ಹ್ಯಾಂಡ್ಸ್ಯಾನಿಟೈಸರ್ ಕೊಡುತ್ತಿದ್ದಾರೆ.
‘ಉಪ್ಪಾರಹಳ್ಳಿ, ಅಶೋಕ ರಸ್ತೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಸ್ಯಾನಿಟೈಸರ್ ಮತ್ತು ನೀರು ಕೊಟ್ಟಿದ್ದೇನೆ’ ಎನ್ನುತ್ತಾರೆ ಶಶಿಧರ್.
ಪೃಥ್ವಿ ಆಂಬುಲೆನ್ಸ್ನ ಮೂರ್ತಿ ಹಾಗೂ ಅವರ ಸ್ನೇಹಿತರಾದ ಡಾ.ವೀರೇಶ್, ನಗರ ಸರ್ಕಾರಿ ಆಸ್ಪತ್ರೆ, ಖಾಸಗಿ ಬಸ್ ನಿಲ್ದಾಣ ಹೀಗೆ ವಿವಿಧ ಕಡೆಗಳಲ್ಲಿದ್ದ ನಿರ್ಗತಿಕರಿಗೆ ಆಹಾರ ಪೊಟ್ಟಣಗಳನ್ನು ನೀಡಿದರು.
‘ಗುರುವಾರ 100 ಆಹಾರ ಪ್ಯಾಕೇಟ್ಗಳನ್ನು ನೀಡಿದ್ದೇವೆ. ಎಲ್ಲಿಯಾದರೂ ಸಾರ್ವಜನಿಕರು ಹೀಗೆ ಅಸಹಾಯಕರು, ನಿರ್ಗತಿಕರಿಗೆ ಊಟ ಅವಶ್ಯವಾಗಿದ್ದರೆ ಮಾಹಿತಿ ನೀಡಬಹುದು’ ಎಂದು ಮೂರ್ತಿ ತಿಳಿಸಿದರು. ಅವರ ಸಂಪರ್ಕ ಸಂಖ್ಯೆ 9986824666.
ಮಹಾನಗರ ಪಾಲಿಕೆ ಆವರಣದಲ್ಲಿ ಡೇನಲ್ಮ್ ಯೋಜನೆಯಡಿ ನಿರ್ಮಿಸಿರುವ ವಸತಿ ನಿಲಯದಲ್ಲಿ 40ಕ್ಕೂ ಹೆಚ್ಚು ಭಿಕ್ಷುಕರಿಗೆ ಆಶ್ರಯ ಕಲ್ಪಿಸಲಾಗಿದೆ. ಆಯುಕ್ತ ಟಿ.ಭೂಬಾಲನ್ ಇಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ನಗರದ ರಾಮಕೃಷ್ಣ ರಸ್ತೆಯಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಕ್ಯಾಂಪ್ನಲ್ಲಿ ನೆಲೆಸಿರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಮಿಕರಿಗೆ ಸೋಪ್ಗಳನ್ನು ವಿತರಿಸಲಾಯಿತು.