ಶಿರಾ: ‘ಅನ್ನಭಾಗ್ಯ ಯೋಜನೆಯಲ್ಲಿ ಹಂದಿಗಳು ತಿನ್ನದಂತಹ ಅಕ್ಕಿ, ರಾಗಿಯನ್ನು ನೀಡಿ, ಬಡಜನರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.
ತಾಲ್ಲೂಕಿನ ಬಾಲೇನಹಳ್ಳಿ, ಚಿಕ್ಕದಾಸರಹಳ್ಳಿ, ಕಳ್ಳಂಬೆಳ್ಳ, ಮರಳಪ್ಪನಹಳ್ಳಿಯಲ್ಲಿ ರೋಡ್ ಷೊ ನಡೆಸಿ ಮತಯಾಚಿಸಿದರು.
‘ಹಸಿವಿನಿಂದ ಯಾರು ಸಂಕಷ್ಟ ಪಡಬಾರದು ಎಂದು ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ 7 ಕೆ.ಜಿ ಅಕ್ಕಿ ನೀಡುತ್ತಿತ್ತು. ಬಿಜೆಪಿ ಸರ್ಕಾರ ಅದರಲ್ಲಿ 2 ಕೆ.ಜಿ ಕಡಿತ ಮಾಡಿದೆ. ಅದೂ ತಿನ್ನಲು ಯೋಗ್ಯವಾಗಿಲ್ಲ. ಅನ್ನಭಾಗ್ಯದಲ್ಲೂ ಭ್ರಷ್ಟಾಚಾರ ನಡೆಸುತ್ತಿರುವವರಿಗೆ ಜನರು ತಕ್ಕ ಉತ್ತರ ನೀಡಬೇಕು’ ಎಂದರು.
ಶಾಸಕ ಎಂ.ಬಿ.ಪಾಟೀಲ ಮಾತನಾಡಿ, ‘ಜಯಚಂದ್ರ ಅವರು ಕೃಷ್ಣ ಹಾಗೂ ಕಾವೇರಿ ನದಿ ನೀರು ತಂದು ಈ ಭಾಗದ ಜನರ ಬದುಕು ಹಸನು ಮಾಡಿದ್ದಾರೆ. ಇವರ ಜನಪರ ಕಾಳಜಿ ಹಾಗೂ ಇಚ್ಛಾಶಕ್ತಿ ಗುರುತಿಸಿ ಮತ ನೀಡಬೇಕು’ ಎಂದರು.
ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ‘ಜಯಚಂದ್ರ ಆಯ್ಕೆಯಿಂದ ಶಿರಾ ಕ್ಷೇತ್ರಕ್ಕೆ ಮಾತ್ರ ಲಾಭವಾಗುವುದಿಲ್ಲ. ವಿಧಾನಸಭೆಯಲ್ಲಿ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡುವ ಮೂಲಕ ರಾಜ್ಯಕ್ಕೆ ಶಕ್ತಿಯಾಗುತ್ತಾರೆ’ ಎಂದರು.